ಪೊನ್ನಂಪೇಟೆ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ನಾಲ್ಕೇರಿ ಬಾಡಗ ಗ್ರಾಮದಲ್ಲಿ ನಡೆಯುತ್ತಿದ್ದ ಮರ ಅಕ್ರಮ ಮಾರಾಟ ಪ್ರಕರಣ ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭಾನುವಾರ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ದೊಡ್ಡ ಮರ ಅಕ್ರಮ ಮಾರಾಟ ಪ್ರಕರಣ ಇದಾಗಿದ್ದು, ಬಂಧಿತರದಿಂದ ₹ 1 ಕೋಟಿ ಮೌಲ್ಯದ ಮರದ ದಿಮ್ಮಿ ಹಾಗೂ ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಜಾತಿಯ ಬೆಲೆ ಬಾಳುವ ಮರದ 288 ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಮುಖ ಆರೋಪಿ ಪಲ್ಲೇರಿ ಗ್ರಾಮದ ಕಳ್ಳಿಚಂಡ ನೋಬನ್, ನಾಲ್ಕೇರಿ ಗ್ರಾಮದ ಲಾರಿ ಚಾಲಕ ರಾಜೇಂದ್ರ ಹಾಗೂ ಕಾರ್ಮಿಕ ಅಯ್ಯಪ್ಪ ಬಂಧಿತರು.
ನಾಟಾಗಳು ಕಾಣದಂತೆ ಲಾರಿಯ ಸುತ್ತಲೂ ಮರದ ಪುಡಿ ತುಂಬಿದ ಚೀಲಗಳನ್ನಿಟ್ಟು ಸಾಗಣೆ ಮಾಡುತ್ತಿದ್ದರು. ಗೋಣಿಕೊಪ್ಪಲು ಸಮೀಪ ಭಾನುವಾರ ಲಾರಿ ತಪಾಸಣೆ ಮಾಡುವಾಗ ಮರಗಳನ್ನು ಕಡಿದು ನಾಟಾವಾಗಿ ಪರಿವರ್ತಿಸಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳಚಂಡ ನೋಬನ್ ಅವರ ಮನೆಯ ಬಳಿಯೂ ಶೋಧಿಸಿದಾಗ ಅಲ್ಲೂ ತೇಗ, ಬೀಟೆ, ಹೆಬ್ಬಲಸು ಹಾಗೂ ಹಲಸಿನ ದಿಮ್ಮಿಗಳು ಪತ್ತೆಯಾಗಿವೆ.
ಎರಡು ಲಾರಿ, ಜೀಪು, ಕಾರು ಹಾಗೂ ಕ್ರೇನ್ ವಶಕ್ಕೆ ಪಡೆಯಲಾಗಿದೆ. ಕಾನೂನು ರೀತಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ತಿಳಿಸಿದರು.