ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಸಮೂಹ ದೇಗುಲಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ. 14ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಭಕ್ತಾದಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.
6ನೇ ವೇತನ ಆಯೋಗದ ನಿಯಮಾನುಸಾರ ಶೇ 30ರಷ್ಟು ವೇತನ ಹೆಚ್ಚಿಸುವುದು, ಪಿಂಚಣಿ ನೀಡುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಚಾಮುಂಡಿಬೆಟ್ಟ ಸಮೂಹ ದೇಗುಲಗಳ ನೌಕರರ ಸಂಘ ಒತ್ತಾಯಿಸಿದೆ.
‘ಡಿ. 14ರಂದು ಬೆಳಿಗ್ಗೆ ನಿತ್ಯದ ಪೂಜಾವಿಧಿಗಳನ್ನು ಮುಗಿಸಿ, ಮಹಾಮಂಗಳಾರತಿ ನಂತರ ಎಲ್ಲ ನೌಕರರು ದೇಗುಲದ ಹೊರಗಡೆ ಕುಳಿತು ಪ್ರತಿಭಟನೆಯಲ್ಲಿ ತೊಡಗುವರು. ಬರುವ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ನೀಡುವುದು ಸೇರಿದಂತೆ ಇತರ ಸೇವೆಗಳನ್ನು ನೀಡುವುದಿಲ್ಲ’ ಎಂದು ಸಂಘದ ಕಾರ್ಯದರ್ಶಿ ವಿಶ್ವನಾಥ್ ತಿಳಿಸಿದರು.
ಚಾಮುಂಡಿಬೆಟ್ಟ ಸಮೂಹ ದೇಗುಲಗಳ ವ್ಯಾಪ್ತಿಯಲ್ಲಿ ಒಟ್ಟು 24 ದೇವಸ್ಥಾನಗಳಿವೆ. ಇಲ್ಲಿ 183 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.