ಹುಬ್ಬಳ್ಳಿ: ‘ಬೀದರ್– ಕಲಬುರ್ಗಿ– ಬೆಂಗಳೂರು, ಬೀದರ್– ಬೆಳಗಾವಿ, ಮಂಗಳೂರು– ಬೆಂಗಳೂರು ನಡುವೆ ಶೀಘ್ರದಲ್ಲಿಯೇ ಹೊಸ ರೈಲುಗಳ ಸಂಚಾರ ಆರಂಭವಾಗಲಿದೆ. ಹುಬ್ಬಳ್ಳಿ– ಬೆಂಗಳೂರು ನಡುವೆ ತಡೆ ರಹಿತ ರೈಲು ಓಡಿಸಲಾಗುವುದು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಮಂಗಳವಾರ ರೈಲ್ವೆ ನೇಮಕಾತಿ ಮಂಡಳಿಯ ಸ್ಯಾಟ್ಲೈಟ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ತಡೆ ರಹಿತ ರೈಲು ಓಡಿಸುವ ಕುರಿತು ಅಧಿಕಾರಿಗಳು ಅಧ್ಯಯನ ನಡೆಸಿ ವರದಿ ನೀಡಿದ ನಂತರ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ’ ಎಂದು ಹೇಳಿದರು.
‘ಧಾರವಾಡದಿಂದ ಕಿತ್ತೂರು ಮೂಲಕ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ನಿರ್ಮಾಣದ ವಿಸ್ತ್ರತ ವರದಿ ರೈಲ್ವೆ ಮಂಡಳಿ ಕೈಸೇರಿದೆ. ಬಜೆಟ್ ವೇಳೆಗೆ ಏನಾಗಲಿದೆ ಎಂಬುದನ್ನು ಕಾದು ನೋಡಿ. ಹುಬ್ಬಳ್ಳಿ– ಅಂಕೋಲಾ ಮಾರ್ಗಕ್ಕೆ ಅರಣ್ಯ ಇಲಾಖೆಯ ಅನುಮತಿ ಬೇಕಿದೆ. ಅನುಮತಿ ಕೊಡಿಸುವ ಕೆಲಸವನ್ನು ಕೇಂದ್ರ ಮಾಡಲಿದೆ’ ಎಂದರು.
‘ಮೇಕ್ ಇನ್ ಇಂಡಿಯಾದಡಿ ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿ ರೈಲ್ವೆ ಬಿಡಿಭಾಗಗಳ ಹಬ್ ಆರಂಭಿಸುವ ಉದ್ದೇಶವಿದೆ. ಇದಕ್ಕಾಗಿ ಅಲ್ಲಿ ಜಾಗವನ್ನೂ ನೋಡಲಾಗಿದೆ. ಸ್ಥಳೀಯರಿಗೆ ಕಾರ್ಖಾನೆಗಳನ್ನು ಆರಂಭಿಸಲು ಮೊದಲ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.