ಹೊಸಕೋಟೆ: ತಾಲ್ಲೂಕಿನ ದೇವನಗುಂದಿ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಕೊರೆಸಿದ ಕೊಳವೆಬಾವಿಗಳಲ್ಲಿ ಪೆಟ್ರೋಲ್ ಮಿಶ್ರಿತ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗೀತಾ ಅವರು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರು ನೀಡಿರುವ ದೂರಿನ ಬಗ್ಗೆ ಪರಿಶೀಲಿಸಲಾಗಿದೆ. ಪೆಟ್ರೋಲಿಯಂ ಪದಾರ್ಥಗಳು ಹೇಗೆ ಅಂತರ್ಜಲ ಸೇರು ತ್ತಿದೆ ಎಂಬುದು ತಿಳಿಯುತ್ತಿಲ್ಲ. ಆದರೆ, ಈಗಾಗಲೇ ಸಂಸ್ಕರಣಾ ಘಟಕದ ಸುತ್ತ ಮುತ್ತ ಸುಮಾರು 500 ರಿಂದ 600 ಮೀಟರ್ ವ್ಯಾಪ್ತಿಯಲ್ಲಿ ಕೊರೆದಿರುವ ಕೊಳವೆಬಾವಿಗಳಲ್ಲಿ ಪೆಟ್ರೋಲ್ ಮಿಶ್ರಿತ ನೀರು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಹೆಚ್ಚಾಗಬಾರದೆಂದು ಪರಿಶೀಲಿಸಲಾಗಿದೆ ಎಂದರು.
ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಬಾವಿ ಗಳ ನೀರನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪರೀಕ್ಷಿಸಲು ಕಳುಹಿಸಲಾಗಿದೆ. 15 ದಿನಗಳಲ್ಲಿ ವರದಿ ಬರಲಿದೆ. ಆನಂತರ ಮುಂದಿನ ಕ್ರಮದ ಬಗ್ಗೆ ಯೋಜಿಸಲಾಗುತ್ತದೆ ಎಂದರು.
ಎಚ್ಪಿಸಿಎಲ್ ಅಧಿಕಾರಿ ಗೊವಿಂದರಾಜು ಪ್ರತಿಕ್ರಿಯಿಸಿ, ಸಂಸ್ಥೆಯಿಂದ ಯಾವುದೇ ಪೆಟ್ರೋಲಿಯಂ ಪದಾರ್ಥ ಗಳು ಸೋರಿಕೆಯಾಗಿ ಅಂತರ್ಜಲ ಸೇರಿರುವ ಸಾಧ್ಯತೆ ಇಲ್ಲ. ಆದರೂ, ಈ ಭಾಗದ ಸುತ್ತಮುತ್ತಲ ಕೊಳವೆಬಾವಿಯಲ್ಲಿ ಪೆಟ್ರೋಲ್ ಅಂಶ ಕಂಡು ಬಂದಿದೆ. ಈ ಬಗ್ಗೆ ಮಂಡಳಿ ವರದಿ ಬಂದ ನಂತರ ತಿಳಿಯುತ್ತದೆ ಎಂದರು.