ಬೆಂಗಳೂರು:‘ಅನ್ನಭಾಗ್ಯ ಯೋಜನೆಯಡಿ ತೊಗರಿಬೇಳೆ ವಿತರಿಸುವುದನ್ನು ನಿಲ್ಲಿಸುವುದಾಗಿ ಸರ್ಕಾರ ನಿರ್ಧರಿಸಿರುವುದು ಸರಿಯಲ್ಲ. ಪೋಷಕಾಂಶಯುಕ್ತ ತೊಗರಿ ಬೇಳೆಯ ವಿತರಣೆಯನ್ನು ಸರ್ಕಾರ ಮುಂದುವರಿಸಬೇಕು’ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ಟಿ.ಎನ್. ಪ್ರಕಾಶ್ ಕಮ್ಮರಡಿ ಒತ್ತಾಯಿಸಿದ್ದಾರೆ.
‘ರಾಜ್ಯ ತೊಗರಿ ಬೇಳೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಹಿಂದಿನ ಸರ್ಕಾರ ಬಿಪಿಎಲ್ ಕುಟುಂಬಕ್ಕೆ ರಿಯಾಯಿತಿ ದರದಲ್ಲಿ ತಿಂಗಳಿಗೆ ಒಂದು ಕೆಜಿ ತೊಗರಿ ಬೇಳೆ ನೀಡುತ್ತಿತ್ತು. ಇದರಿಂದಾಗಿ ರೈತರು ಮತ್ತು ಗ್ರಾಹಕರ ಹಿತ ಕಾಯುವ ಕೆಲಸವಾಗಿತ್ತು’ ಎಂದು ಅವರು ಹೇಳಿದ್ದಾರೆ.
‘ರೈತರಿಂದ ಪ್ರತಿ ಕೆಜಿಗೆ ₹31ರ ದರದಲ್ಲಿ ಖರೀದಿಸಿದ ತೊಗರಿ ಕಾಳನ್ನು ಮಾರಾಟ ಮಾಡಿ ನಂತರ ಟೆಂಡರ್ ಮೂಲಕ ಕೆಜಿಗೆ ₹80ರಂತೆ ತೊಗರಿ ಬೇಳೆಯನ್ನು ಖರೀದಿಸಿ ವಿತರಿಸುವುದರ ಬಗ್ಗೆ ಪುನರ್ ಯೋಚಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.