ಬೆಂಗಳೂರು: ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘ ಮುಜರಾಯಿ ಇಲಾಖೆಯ ‘ಸಿ’ ದರ್ಜೆ ದೇವಾಲಯಗಳ ಅರ್ಚಕರ ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಮಾರ್ಚ್ 7ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಾನಕಿರಾಮ,‘ಮೌರ್ಯ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಮೆರವಣಿಗೆ ನಡೆಸಲಾಗುತ್ತದೆ. ವಿವಿಧ ಜಿಲ್ಲೆಗಳ ಅರ್ಚಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
‘ರಾಜ್ಯದಲ್ಲಿ 34 ಸಾವಿರ ‘ಸಿ’ ದರ್ಜೆ ದೇವಾಲಯಗಳಿವೆ. ಅವುಗಳಲ್ಲಿಬಹುತೇಕ ಗ್ರಾಮೀಣ ಪ್ರದೇಶದಲ್ಲಿವೆ. ಒಂದು ದೇವಸ್ಥಾನಕ್ಕೆ ಮಾಸಿಕ₹4,000 ಪೂಜಾ ಸಾಮಗ್ರಿ ಖರೀದಿ ಮೊತ್ತ (ತಸ್ತೀಕ್) ನೀಡಲಾಗುತ್ತದೆ. ಅರ್ಚಕರಿಗೆ ಕೇವಲ₹1,400 ಗೌರವಧನ ನೀಡಲಾಗುತ್ತದೆ. ಅದನ್ನೂ ಸರಿಯಾಗಿ ನೀಡಲ್ಲ’ ಎಂದು ದೂರಿದರು.
‘ದೇವಾಲಯಗಳು ದುಸ್ಥಿತಿಯಲ್ಲಿವೆ. ಜೀರ್ಣೋದ್ಧಾರಕ್ಕೂ ಸರ್ಕಾರ ಮುಂದಾಗುತ್ತಿಲ್ಲ. ದೇವಸ್ಥಾನಗಳ ಜೀರ್ಣೋದ್ಧಾರ ಮಾಡಬೇಕು. ಅರ್ಚಕರ ಗೌರವಧನವನ್ನು ₹5000 ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.