ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ತಾಪಮಾನ ಹೆಚ್ಚಾಗಿದ್ದು, ಇದರ ನಡುವೆಯೇ ಶುಕ್ರವಾರ ಸಂಜೆ ಮಳೆ ಸುರಿದು ತಂಪೆರೆಯಿತು.
ಸಂಪಂಗಿರಾಮನಗರ, ಶಾಂತಿನಗರ, ಗಾಂಧಿನಗರ, ಎಂ.ಜಿ.ರಸ್ತೆ, ಇಂದಿರಾನಗರ, ಹಲಸೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ತುಂತುರು ಮಳೆ ಆಯಿತು.
ಬಳ್ಳಾರಿ ರಸ್ತೆಯಲ್ಲಿರುವ ಪ್ರದೇಶಗಳಲ್ಲಿ ಜೋರು ಮಳೆ ಸುರಿಯಿತು. ಬ್ಯಾಟರಾಯನಪುರ ಮೇಲ್ಸೇತುವೆಯಲ್ಲೇ ನೀರು ಹರಿಯಿತು. ನೀರಿನಲ್ಲೇ ವಾಹನಗಳು ಸಂಚರಿಸಿದವು. ಸಂಚಾರ ಪೊಲೀಸರೇ ಮೇಲ್ಸೇತುವೆಯಲ್ಲಿ ನೀರು ಹೋಗಲು ಜಾಗ ಮಾಡಿದರು. ಕೆಲ ಗಂಟೆಗಳ ಬಳಿಕವೇ ಮೇಲ್ಸೇತುವೆ ಯಥಾಸ್ಥಿತಿಗೆ ಬಂತು.
ಬೆಳಿಗ್ಗೆಯಿಂದಲೇನಗರದಲ್ಲಿ ಬಿಸಿಲಿನ ತಾಪ ಹೆಚ್ಚಿತ್ತು. ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣದೊಂದಿಗೆ ಜೋರು ಗಾಳಿ ಬೀಸಿತು. ನಂತರ, ಜಿನುಗು ಮಳೆ ಶುರುವಾಯಿತು. ಕೆಲವೆಡೆ ಜೋರಾಗಿಯೇ ಸುರಿಯಿತು.
‘ಬ್ಯಾಟರಾಯನಪುರ ಮೇಲ್ಸೇತುವೆ ಸೇರಿ ಕೆಲವೆಡೆ ನೀರು ನಿಂತ ಬಗ್ಗೆ ದೂರುಗಳು ಬಂದಿದ್ದವು. ಮಳೆ ನಿಂತ ಕೆಲವೇ ಗಂಟೆಗಳಲ್ಲಿ ನೀರು ಹರಿದುಹೋಗಿದೆ.ಇದನ್ನು ಹೊರತು ಪಡಿಸಿ ಯಾವುದೇ ಹಾನಿ ಸಂಭವಿಸಿದಬಗ್ಗೆ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.