ಬೆಂಗಳೂರು:ಖ್ಯಾತ ಲೇಖಕ, ಸಂಶೋಧಕ, ಅನುವಾದಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, ರಾಜ್ಯ ಪ್ರಶಸ್ತಿ ಪುರಸ್ಕೃತ ರಂ.ಶಾ.ಲೋಕಾಪುರಮಂಗಳವಾರ ರಾತ್ರಿ ಪುಣೆಯಲ್ಲಿ ನಿಧನರಾದರು.
ಸಾವಿತ್ರಿ, ತಾಯಿಸಾಹೇಬದಂಥ ಶ್ರೇಷ್ಠ ಕಾದಂಬರಿಗಳು, ಸಂಕಾನಟ್ಟಿಯ ಚಂದ್ರಿ, ನೆಳಲಿಯ ಪ್ರಸಂಗ ಮೊದಲಾದ ನಾಟಕಗಳು ಜನಪ್ರಿಯವಾಗಿದ್ದವು. ಮರಾಠಿ ಭಾಷೆಯ ಮಹತ್ವದ ಕೃತಿ ‘ಜ್ಞಾನೇಶ್ವರಿ’ಯನ್ನು ಕನ್ನಡಕ್ಕೆ ತಂದಿದ್ದಾರೆ.
ಮರಾಠಿ ಸಾಹಿತ್ಯದ ಮೇಲೆ ಕನ್ನಡದ ಪ್ರಭಾವ ಕುರಿತು ಆಳವಾದ ಸಂಶೋಧನೆ ಮಾಡಿದ್ದರು. ಅನಂತಮೂರ್ತಿಯವರ ‘ಸಂಸ್ಕಾರ’, ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ಕಾದಂಬರಿಗಳನ್ನು ಮರಾಠಿಗೆ ಅನುವಾದ ಮಾಡಿದ್ದರು. ಇವರ ಅನೇಕ ಕೃತಿಗಳು ಇತರೆ ಭಾಷೆಗೆ ಅನುವಾದವಾಗಿವೆ.
ಧಾರವಾಡದ ಮನೋಹರ ಗ್ರಂಥಮಾಲೆಯು ಇವರ ಕೆಲ ಕೃತಿಗಳನ್ನು ಪ್ರಕಟಿಸಿದೆ. ಬುಧವಾರ (ನ.20) ಬೆಳಿಗ್ಗೆ 11ಕ್ಕೆ ಧಾರವಾಡದ ಮನೋಹರ ಗ್ರಂಥಮಾಲೆ ಅಟ್ಟದಲ್ಲಿ ಸಾಹಿತ್ಯಾಸಕ್ತರು ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಿದ್ದಾರೆ.