ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಮಿಠಾಯಿ, ಮೊಟ್ಟೆ, ಕೈಮಾ ಸಾರು!

ಅಂಬರೀಷ್‌ ಮೆನು; ನಾಟಿ ಹಸುವಿನ ತುಪ್ಪ, ನಂಜನಗೂಡು ರಸಬಾಳೆ ಅಚ್ಚುಮೆಚ್ಚು
Last Updated 25 ನವೆಂಬರ್ 2018, 20:19 IST
ಅಕ್ಷರ ಗಾತ್ರ

ಮಂಡ್ಯ: ನಗರದ ಕಾರೆಮನೆ ಗೇಟ್‌ನಲ್ಲಿರುವ ಮಿಠಾಯಿ ಅಂಗಡಿ ಬೆಳಕಿಗೆ ಬಂದಿದ್ದೇ ರೆಬಲ್‌ಸ್ಟಾರ್‌ ಅಂಬರೀಷ್‌ ಅವರಿಂದ. ಮಹದೇವಯ್ಯನ ಕೈಯಿಂದ ತಯಾರಾಗುತ್ತಿದ್ದ ತೆಂಗಿನಕಾಯಿ, ಬೆಲ್ಲದ ಮಿಠಾಯಿ ಎಂದರೆ ಅಂಬರೀಷ್‌ ಬಾಯಲ್ಲಿ ಸದಾ ನೀರು ಬರುತ್ತಿತ್ತು.

ಕೇಂದ್ರ ಸಚಿವರಾದ ಸಂದರ್ಭದಲ್ಲೂ ಅಂಬರೀಷ್‌, ಮಹದೇವಯ್ಯ ತಯಾರಿಸುತ್ತಿದ್ದ ಮಿಠಾಯಿ ನೆನಪು ಮಾಡಿಕೊಂಡು ಕಾರೆಮನೆ ಗೇಟ್‌ಗೆ ಬರುತ್ತಿದ್ದರು. ಅಂಗಡಿಯಲ್ಲಿರುವ ಎಲ್ಲಾ ಮಿಠಾಯಿಯನ್ನು ಒಂದೇ ಸಾರಿ ಖಾಲಿ ಮಾಡುತ್ತಿದ್ದರು. ತಾವೂ ತಿಂದು, ತಮ್ಮ ಜೊತೆಯಲ್ಲಿ ಬಂದವರಿಗೆ ತಿನ್ನಿಸಿ, ಮನೆಗೂ ಕಟ್ಟಿಸಿಕೊಂಡು ತೆರಳುತ್ತಿದ್ದರು. ಅವರು ಮಂಡ್ಯಕ್ಕೆ ಬಂದಾಗಲೆಲ್ಲಾ ತಪ್ಪದೇ ಮಿಠಾಯಿ ತಿನ್ನುತ್ತಿದ್ದರು.

‘ಅಂಬರೀಷ್‌ ಅಂಗಡಿಗೆ ಬರುತ್ತಾರೆ ಎಂದರೆ ಮನೆಮಂದಿಯೆಲ್ಲಾ ಸೇರಿ ಏಳೆಂಟು ಕ್ರೇಟ್‌ ಮಿಠಾಯಿ ತಯಾರಿಸುತ್ತಿದ್ದೆವು. ಕೊಬ್ಬರಿ, ಏಲಕ್ಕಿ ಕಾಯಿ ಹಾಕಿ ಅವರಿಗಾಗಿ ವಿಶೇಷವಾಗಿ ತಯಾರಿಸಿಕೊಡುತ್ತಿದ್ದೆ. ಯಾವ ಸ್ಟಾರ್‌ ಹೋಟೆಲ್‌ನಲ್ಲೂ ಇಂಥಾ ಮಿಠಾಯಿ ಸಿಗುವುದಿಲ್ಲ ಎನ್ನುತ್ತಿದ್ದರು’ ಎಂದು ಮಹದೇವಯ್ಯ ಹೇಳಿದರು.

ಈ ಕುಟುಂಬ ಮೂರು ತಲೆಮಾರುಗಳಿಂದ ತಯಾರಿಸುತ್ತಿರುವ ಮಿಠಾಯಿಗೆ ಅಂಬರೀಷ್‌ ಬ್ರ್ಯಾಂಡ್‌ ರೂಪ ತಂದುಕೊಟ್ಟಿದ್ದರು. ಜಿಲ್ಲಾ ಕ್ರೀಡಾಂಗಣಕ್ಕೆ ಅಂಬರೀಷ್‌ ಮೃತದೇಹ ತರಲಾಗುತ್ತಿದೆ ಎಂಬ ವಿಷಯ ತಿಳಿದೊಡನೆ ಮೃತದೇಹದ ಬಳಿ ಇಡಲು ಮಹದೇವಯ್ಯನವರು ವಿಶೇಷ ಮಿಠಾಯಿ ತಯಾರಿಸುತ್ತಿದ್ದರು.

ನಾಟಿ ಕೋಳಿ ಮೊಟ್ಟೆ:ನಾಟಿ ಕೋಳಿ ಮೊಟ್ಟೆ ಎಂದರೆ ಅಂಬರೀಷ್‌ಗೆ ಬಲು ಅಚ್ಚುಮೆಚ್ಚು. ಕಾಂಗ್ರೆಸ್‌ ಮುಖಂಡ ಅಮರಾವತಿ ಚಂದ್ರಶೇಖರ್‌ ಮನೆಯಲ್ಲಿ ಅವರಿಗೆ ಊಟ ಸಿದ್ಧಗೊಳ್ಳುತ್ತಿತ್ತು. ಅವರಿಗಾಗಿ ಹಳ್ಳಿಯಿಂದ ನಾಟಿಕೋಳಿ ಮೊಟ್ಟೆ ತರಿಸಿ ಬೇಯಿಸಿ ಕೊಡುತ್ತಿದ್ದರು. ಮಾತು ಹಾಗೂ ಸಿಗರೇಟ್‌ ನಡುವೆ ಉಪ್ಪುಖಾರ ಬೆರೆಸಿದ ಮೊಟ್ಟೆಯ ಪಕಳೆಯನ್ನು ತಿಂದು ಚಪ್ಪರಿಸುತ್ತಿದ್ದರು. ಇದರ ಜೊತೆಗೆ ನಾಟಿ ಹಸುವಿನ ಬೆಣ್ಣೆಯಿಂದ ತಯಾರಿಸಿದ ತುಪ್ಪ, ನಂಜನೂಡು ರಸಬಾಳೆ ಹಣ್ಣು ಎಂದರೆ ಬಹಳ ಇಷ್ಟ ಪಡುತ್ತಿದ್ದರು. ಹಳ್ಳಿಗಳ ಜನರು ಬೆಣ್ಣೆ, ತುಪ್ಪವನ್ನು ಬೆಂಗಳೂರಿಗೆ ಹೋಗಿ ಕೊಡುತ್ತಿದ್ದರು.

‘ಜೆ.ಪಿ.ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಮನೆ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಅವರು ಹೊಸಮನೆಗೆ ತೆರಳಲು ಕಾತರಿಸುತ್ತಿದ್ದರು. ದೀಪಾವಳಿಯ ದಿನ ನಾನು ಬೆಂಗಳೂರಿನಲ್ಲಿ ಭೇಟಿಯಾಗಿದ್ದೆ. 2019ರ ಫೆ.10ರಂದು ಹೊಸ ಮನೆಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಬಾಯಿ ಕೆಟ್ಟಿದೆ, ನಾಟಿಕೋಳಿ ಮೊಟ್ಟೆ ತಿನ್ನಬೇಕು ಎಂದಿದ್ದರು’ ಎಂದು ಅವರ ಆಪ್ತ, ಗೃಹರಕ್ಷಕ ದಳದ ಕಮಾಂಡೆಂಟ್‌ ಕೆ.ಎಂ.ಮಹೇಶ್‌ ಹೇಳಿದರು.

ರಫೀ ಮನೆ ಕೈಮಾ ಸಾರು ಇಷ್ಟ:ಲಾರಿ ಹಾಯ್ದು ಈಚೆಗೆ ಮೃತಪಟ್ಟ ಕಾಂಗ್ರೆಸ್‌ ಮುಖಂಡ ರಫೀ ಉಲ್ಲಾ ಅವರ ಮನೆಯ ಕೈಮಾ ಸಾರು ಎಂದರೆ ಅಂಬರೀಷ್‌ಗೆ ಅಚ್ಚುಮೆಚ್ಚು. ರಫೀ ಅಂಬರೀಷ್‌ ಅವರ ಹುಚ್ಚು ಅಭಿಮಾನಿಯಾಗಿದ್ದು ದೇವರು ಎಂದೇ ನಂಬಿದ್ದರು. ಶಫೀ ಆಗಾಗ ಮನೆಯಿಂದ ಕೈಮಾ ಸಾರು ಮಾಡಿಸಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದರು. ಮಂಡ್ಯಕ್ಕೆ ಬಂದಾಗಲೆಲ್ಲಾ ತಪ್ಪದೇ ಕೈಮಾ ರುಚಿ ನೋಡುತ್ತಿದ್ದರು. ಈಚೆಗೆ ಶಫೀ ಮೃತಪಟ್ಟಾಗ ಅವರ ಮನೆಗೆ ಭೇಟಿ ನೀಡಿ ಕಣ್ಣೀರು ಹಾಕಿದ್ದರು. ಕುಟುಂಬ ಸದಸ್ಯರಿಗೆ ಧನಸಹಾಯ ಮಾಡಿದ್ದರು.

**

ರಾಮಣ್ಣನ ಈರುಳ್ಳಿ ದೋಸೆ

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವಾಗ ಅಂಬರೀಷ್‌, ಮದ್ದೂರು ಟಿಬಿ ಸರ್ಕಲ್‌, ರಾಮಣ್ಣನ ಹೋಟೆಲ್‌ನಲ್ಲಿ ತಯಾರಾಗುತ್ತಿದ್ದ ಈರುಳ್ಳಿ ದೋಸೆ ರುಚಿ ನೋಡಿಯೇ ಮುಂದೆ ತೆರಳುತ್ತಿದ್ದರು.

ಕಡ್ಲೆಬೇಳೆ ಹಾಗೂ ಈರುಳ್ಳಿಯಿಂದ ರಾಮಣ್ಣ ದೋಸೆ ಮಾಡಿಕೊಡುತ್ತಿದ್ದರು. ರಸ್ತೆ ಬದಿಯಲ್ಲೇ ನಿಂತು ದೋಸೆ ತಿಂದು ರಾಮಣ್ಣನ ಹೆಗಲ ಮೇಲೆ ಕೈಹಾಕಿ ಕಷ್ಟಸುಖ ಕೇಳಿ ತೆರಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT