ಚಿತ್ರದುರ್ಗ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರಿಗೆ ದೂರದಿಂದಲೇ ಹರಸಲು ವೇದಿಕೆಗೆ ಟೇಪ್ ಕಟ್ಟಿ ಮದುವೆ ಕಾರ್ಯ ಮುಗಿಸಿರುವುದು ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ಶುಕ್ರವಾರ ನಡೆದಿದೆ.
ಮೊಳಕಾಲ್ಮುರು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಕಾಂತ ರೆಡ್ಡಿ ಅವರ ಪುತ್ರ ಅಮರೇಶ ಮತ್ತು ಧಾರವಾಡದ ಶ್ರೀಧರ್ ರೆಡ್ಡಿ ಪುತ್ರಿ ಸ್ನೇಹ ಅವರ ಮದುವೆ ಶುಕ್ರವಾರ ನಿಗದಿಯಾಗಿತ್ತು. ಆದರೆ, ಕೊರೊನಾ ವೈರಸ್ಭೀತಿಯಿಂದ ಮದುವೆ ಸಮಾರಂಭಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು.
ರಾಂಪುರದ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಂಟಪವನ್ನು ಅದ್ದೂರಿಯಾಗಿ ಸಿಂಗರಿಸಲಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಿಷೇಧಾಜ್ಞೆ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಸರಳವಾಗಿ ಮದುವೆ ಮುಗಿಸುವಂತೆ ಸೂಚನೆ ನೀಡಿದರು.
ಹೀಗಾಗಿ ವಧು-ವರರ ಸುತ್ತ ಮೂರು ಮೀಟರ್ ದೂರ ಟೇಪ್ ಸುತ್ತಿ ನಿರ್ಬಂಧಿತ ಪ್ರದೇಶ ಸೃಷ್ಟಿಸಲಾಗಿತ್ತು. ವಿವಾಹಕ್ಕೆ ಬಂದಿದ್ದ ಸಂಬಂಧಿಕರು ಹಾಗೂ ಹಿತೈಷಿಗಳಿಗೆ ಮಾಸ್ಕ್ ನೀಡಲಾಯಿತು. ಅಕ್ಷತೆ ಹಾಕಿದ ಜನರು ವೇದಿಕೆಗೆ ತೆರಳಿ ದೂರದಿಂದಲೇ ನವ ದಂಪತಿಗಳನ್ನು ಹರಸಿದರು.