ಮೈಸೂರು: ‘ಜೆಡಿಎಸ್, ಕಾಂಗ್ರೆಸ್ನ ಕೆಲ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ಆಮಿಷವನ್ನು ಬಿಜೆಪಿ ಮುಖಂಡರು ಮತ್ತೆ ಒಡ್ಡಿದ್ದಾರೆ. ದೂರವಾಣಿ ಕರೆ ಬಂದಿರುವ ವಿಚಾರವನ್ನು ಶಾಸಕರು ಮುಖ್ಯಮಂತ್ರಿ ಗಮನಕ್ಕೆ ಭಾನುವಾರ ತಂದಿದ್ದಾರೆ’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇಲ್ಲಿ ಸೋಮವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಶಾಸಕರನ್ನು ಸೆಳೆಯಲು ಒಂದಲ್ಲಾ ಒಂದು ಆಸೆ ತೋರಿಸುತ್ತಿದ್ದಾರೆ. ಕೇಂದ್ರದಲ್ಲಿ ಅವರ ಅವಧಿ ಎರಡು ತಿಂಗಳು ಮಾತ್ರ. ಯಾವ ರೀತಿ ಮಂತ್ರಿ ಸ್ಥಾನ ನೀಡುತ್ತಾರೋ ಗೊತ್ತಿಲ್ಲ’ ಎಂದರು.
‘ವಿರೋಧ ಪಕ್ಷದ ಜವಾಬ್ದಾರಿ ಮರೆತು ಕುರ್ಚಿಗಾಗಿ ಬಿಜೆಪಿಯವರು ಏನೆಲ್ಲಾ ಕಸರತ್ತು ನಡೆಸುತ್ತಿದ್ದಾರೆ ಎಂಬುದನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಅಸಹ್ಯಕರ, ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ’ ಎಂದು ಟೀಕಿಸಿದರು.
‘ಹಿಂದೆ ಹೇಳಿದಂತೆ ಬಿಜೆಪಿಯ ಕೆಲ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲವೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಕಾದು ನೋಡಿ’ ಎಂದರು.