ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಭಜಿಸಿ ನೋಡುವುದು ಮಾನವೀಯತೆಯಲ್ಲ’

ಬೊಳುವಾರು ಮಹಮ್ಮದ್ ಕುಂಞಿ ಸಹಿತ ಏಳು ಗಣ್ಯರಿಗೆ ಸಂದೇಶ ಪ್ರಶಸ್ತಿ ಪ್ರದಾನ
Last Updated 9 ಫೆಬ್ರುವರಿ 2020, 15:37 IST
ಅಕ್ಷರ ಗಾತ್ರ

ಮಂಗಳೂರು: ‘ಮನುಷ್ಯರನ್ನು ವಿಭಜಿಸಿ ನೋಡುವುದು ಮಾನವೀಯತೆ ಅಥವಾ ಧರ್ಮವಲ್ಲ’ ಎಂದು ಸಂದೇಶ ಪ್ರತಿಷ್ಠಾನದ ಅಧ್ಯಕ್ಷ, ಬಳ್ಳಾರಿ ಬಿಷಪ್ ಹೆನ್ರಿ ಡಿ ಸೋಜ ಹೇಳಿದರು.

ನಗರದ ಸಂದೇಶ ಶಿಕ್ಷಣ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಆವರಣದಲ್ಲಿ ಭಾನುವಾರ ನಡೆದ ‘ಸಂದೇಶ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಾವುದೇ ವ್ಯಕ್ತಿಯು ದೇಶ, ಧರ್ಮಗಳನ್ನು ನೋಡಿ ಹುಟ್ಟುವುದಿಲ್ಲ. ಹೀಗಾಗಿ, ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸುವುದು ಹಾಗೂ ಅಶಕ್ತರಿಗೆ ಸ್ಪಂದಿಸುವುದೇ ಧರ್ಮ’ ಎಂದರು.

‘ಸಮಾಜದಲ್ಲಿ ಅತಂತ್ರರು, ಕುತಂತ್ರರು, ಪರತಂತ್ರರು ಇರುತ್ತಾರೆ. ಆದರೆ, ನಾವೆಲ್ಲ ಸ್ವತಂತ್ರರಾಗಿ ಬದುಕಬೇಕು. ತನ್ನಂತೆಯೇ ಇತರರ ಘನತೆಯನ್ನೂ ಕಾಪಾಡಬೇಕು’ ಎಂದರು.

'ಸಂದೇಶ ಸಾಹಿತ್ಯ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ, ‘ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ, ಅಂದರೆ, ಪಾಕಿಸ್ತಾನ- ಬಾಂಗ್ಲಾ ದೇಶ ಹುಟ್ಟುವ ಮೊದಲೇ ಹುಟ್ಟಿದ ತಂದೆಯ ಮಗನಾದ ನಾನು ಭಾರತೀಯನಾಗಿದ್ದು, ಈಗ ಭಾರತೀಯ ಎಂದು ಸಾಬೀತು ಪಡಿಸಬೇಕಾ? ಅದಕ್ಕಾಗಿ ನಾನು ಬದುಕಬೇಕಾ?' ಎಂದು ಆತಂಕ ವ್ಯಕ್ತಪಡಿಸಿದರು.

'ದೇಶದಲ್ಲಿ ಈಗ, ಏನು ವಿಚಾರ ಮಾತನಾಡುತ್ತಿದ್ದಾರೆ ಎಂಬುದು ಮುಖ್ಯವಲ್ಲ ? ಯಾರು ಮಾತನಾಡುತ್ತಿದ್ದಾರೆ? ಎಂಬುದು ಮುಖ್ಯವಾಗುತ್ತಿರುವುದು ಖೇದಕರ’ ಎಂದು ವಿಷಾದ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತ ಕುಮಾರ್,‘ಸಾಹಿತಿಗಳು ರಾಜಕೀಯ ಮಾತನಾಡಿದರೆ, ಮತೀಯ ಸಾಹಿತಿ ಆಗುತ್ತಾರೆ’ ಎಂದರು.

ಅಲ್ಲದೇ,‘ಬಾಂಗ್ಲಾ, ಅಪಘಾನಿಸ್ತಾನ ಮತ್ತು ಪಾಕಿಸ್ತಾನದ ಮುಸ್ಲಿಮರ ಜೊತೆ ಭಾರತೀಯ ಮುಸ್ಲಿಮರನ್ನು ಹೋಲಿಸಿ ಆತಂಕ ಸೃಷ್ಟಿಸಬಾರದು. ಮೋದಿ ದೇಶದ ಪ್ರಧಾನಿ ಅಲ್ಲವೇ? ಪೌರತ್ವ ನೋಂದಣಿ ಸಾಂವಿಧಾನಿಕವಾಗಿ ಮಂಡನೆಯಾದ ಕಾಯಿದೆ ಅಲ್ಲವೇ? ಕಾಯಿದೆ ಬಗ್ಗೆ ತಪ್ಪು ತಪ್ಪು ಸಂದೇಶ ನೀಡಬೇಡಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ ಬೇಡ’ ಎಂದೂ ಅವರು ಸಮರ್ಥನೆ ನೀಡಿದರು.

ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿ ಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT