ಬೆಳಗಾವಿ: ಸಚಿವ ಸಂಪುಟದಿಂದ ಕೈಬಿಟ್ಟಿರುವುದರಿಂದ ಅಸಮಾಧಾನಗೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಮಂಗಳವಾರ ಸಂಜೆ ಗೋಕಾಕಗೆ ಮರಳಿದ್ದಾರೆ.
ರಾಜೀನಾಮೆಗೆ ಮುಂದಾಗಿರುವ ಅವರನ್ನು ಸಮಾಧಾನ ಪಡಿಸಲು, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಜೊತೆ ಬುಧವಾರ ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗಿತ್ತು. ಈ ಸಭೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ರಮೇಶ ವಾಪಸ್ ಬಂದಿದ್ದಾರೆ ಎನ್ನಲಾಗುತ್ತಿದೆ.
‘ಪ್ರಜಾವಾಣಿ’ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ‘ಗೋಕಾಕಗೆ ವಾಪಸ್ ಬಂದಿದ್ದೇನೆ. ಇನ್ನುಳಿದ ವಿಷಯವನ್ನು ನಂತರ ಮಾತನಾಡುವೆ’ ಎಂದಷ್ಟೇ ಹೇಳಿದರು.
ಆದರೆ, ಗೋಕಾಕಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸುತ್ತುವರಿದ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದ್ದ ರಮೇಶ, ‘ನಾ ಏನೂ ಮಾತಾಡಲ್ಲ. ಏನ್ ಧಮ್ಕಿ ಹಾಕ್ತೀರಾ, ಗೂಂಡಾಗಿರಿ ಮಾಡ್ತೀರಾ...?’ ಎಂದು ಕಿಡಿಕಾರಿದ್ದರು.
ಬೆಂಗಳೂರಿನತ್ತ ತಮ್ಮ: ರಮೇಶ ಸಹೋದರ ಸತೀಶ ಜಾರಕಿಹೊಳಿ ಅವರು ವೇಣುಗೋಪಾಲ್ ಅವರ ಸಭೆಗೆ ಹಾಜರಾಗಲು ಬೆಂಗಳೂರಿನತ್ತ ಹಠಾತ್ತಾಗಿ ಪ್ರಯಾಣ ಬೆಳೆಸಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.