ಬೆಳಗಾವಿ: ಇಲ್ಲಿನ ವ್ಯಾಕ್ಸಿನ್ ಡಿಪೊ ಆವರಣದಲ್ಲಿರುವ ಬೃಹತ್ ಮರಗಳನ್ನು ಕತ್ತರಿಸಿರುವ ಕ್ರಮ ಪರಿಸರ ಪ್ರೇಮಿಗಳು ಹಾಗೂ ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ವರ್ಷಗಳಿಂದ ಇದ್ದ ಹಾಗೂ ದೊಡ್ಡ ದೊಡ್ಡ ಮರಗಳಿಗೆ ಕೊಡಲಿ ಏಟು ಬಿದ್ದಿದೆ. ಹತ್ತಾರು ಮರಗಳ ಮಾರಣ ಹೋಮವೇ ನಡೆದಿದೆ. ಯಾವ ಕಾಮಗಾರಿಗಾಗಿ, ಯಾವ ಇಲಾಖೆಯವರು ಕಡಿತಲೆ ಮಾಡಿಸಿದ್ದಾರೆ ಎನ್ನುವುದು ಖಚಿತವಾಗಿ ಗೊತ್ತಾಗಿಲ್ಲ. ರಾತ್ರೋರಾತ್ರಿ ಇವುಗಳನ್ನು ಕಡಿದು ಉರುಳಿಸಲಾಗಿದೆ ಎಂದು ತಿಳಿದುಬಂದಿದೆ.
‘ಮರಗಳನ್ನು ನಾವು ಕತ್ತರಿಸುತ್ತಿಲ್ಲ. ಆದರೆ, ಕೆಲವು ಮರಗಳ ಕಡಿತಲೆಗೆ ಅರಣ್ಯ ಇಲಾಖೆಯವರನ್ನು ಕೋರಿದ್ದೆವು. ಸದ್ಯಕ್ಕೆ ಹೆಚ್ಚಿನ ಮಾಹಿತಿ ಇಲ್ಲ’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ತಿಳಿಸಿದರು.
‘ಸ್ಮಾರ್ಟ್ ಸಿಟಿ ಯೋಜನೆಯ ಕಚೇರಿಯಿಂದ ಮನವಿ ಬಂದಿತ್ತು. ಹೀಗಾಗಿ, ಮರಗಳನ್ನು ಕಡಿದು ತೆರವುಗೊಳಿಸಲಾಗುತ್ತಿದೆ. ಎಷ್ಟು ಮರಗಳನ್ನು ಕತ್ತರಿಸಲಾಗುವುದು ಎಂಬ ಮಾಹಿತಿ ಸದ್ಯಕ್ಕೆ ಇಲ್ಲ’ ಎಂದು ಆರ್ಎಫ್ಒ ರುದ್ರಪ್ಪ ಪ್ರತಿಕ್ರಿಯಿಸಿದರು.