ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ನಗರದಲ್ಲಿ ಗುರುವಾರ ನಡೆದ ಪ್ರತಿಭಟನೆ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಅಮೂಲ್ಯ ಲಿಯೋನಾಗೆ 5ನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಮಧ್ಯೆ, ಅಮೂಲ್ಯ ವಿರುದ್ಧ ರಾಜ್ಯದ ಹಲವೆಡೆ ಆಕ್ರೋಶದ ಕಿಡಿ ಹೊತ್ತಿದೆ. ವಿವಿಧ ಸಂಘಟನೆಗಳ ಕಾರ್ಯಕರ್ತರು ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಅಮೂಲ್ಯ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ರೋಷ ವ್ಯಕ್ತಪಡಿಸಿದ್ದಾರೆ.
ಪರಪ್ಪನ ಅಗ್ರಹಾರಜೈಲಿಗೆಅಮೂಲ್ಯ: ಅಮೂಲ್ಯ ಅವರನ್ನು ಪರಪ್ಪನ ಅಗ್ರಹಾರದ ಜೈಲಿಗೆ ಕಳುಹಿಸಲಾಗಿದೆ. ಜೈಲಿಗೆ ಕರೆದೊಯ್ಯುವ ವೇಳೆ, ಅಮೂಲ್ಯ ವಿಜಯದ ಸಂಕೇತ ತೋರಿಸಿದ್ದಾರೆ.
ಅಮೂಲ್ಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಆಕೆ ನೀಡಿದ ಹೇಳಿಕೆ ಆಧಾರದ ಮೇಲೆ ಬಂಧಿಸಿರುವ ಉಪ್ಪಾರಪೇಟೆ ಠಾಣೆ ಪೊಲೀಸರು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಅಮೂಲ್ಯ ಅವರನ್ನು ಬಂಧಿಸಿದ ಬಳಿಕ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ 5ನೇ ಎಸಿಎಂಎಂ ನ್ಯಾಯಾಧೀಶರಾದ ಶಿರಿನ್ ಜೆ. ಅನ್ಸಾರಿ ನಿವಾಸಕ್ಕೆ ಕರೆದೊಯ್ದು ಹಾಜರು ಪಡಿಸಿದ್ದರು.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್, ಅಮೂಲ್ಯ ವಿಚಾರಣೆ ನಡೆಸಿದಾಗ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಮಾಡಿದ್ದಾರೆ ಎಂದೆನಿಸುತ್ತಿದೆ’ ಎಂದರು.
ಆಯೋಜಕರ ವಿಚಾರಣೆ: ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡು ಅಮೂಲ್ಯಗೆ ಮಾತಿಗೆ ಅವಕಾಶ ಕಲ್ಪಿಸಿದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಈ ಮಧ್ಯೆ, ‘ಅಮೂಲ್ಯಗೆ ನಾವ್ಯಾರು ಆಹ್ವಾನ ಕೊಟ್ಟಿಲ್ಲ. ಡಿಸಿಪಿ ಬಳಿ ನಾನೇ ಸ್ವತಃ ದೂರು ನೀಡಿದ್ದೇನೆ’ ಎಂದು ಇಮ್ರಾನ್ ಹೇಳಿದ್ದಾರೆ. ಅಲ್ಲದೆ, ನಮ್ಮ ಪ್ರತಿಭಟನೆ ಹತ್ತಿಕ್ಕಲು, ಶಾಂತಿಭಂಗ ಮಾಡಲು ಯಾರೋ ಸಂಚು ನಡೆಸಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.