ಕೌಜಲಗಿ: ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮಿ ಮಲ್ಲಪ್ಪ ಈಟಿ ಅವರು ಶಾಲೆಗೆ ಟೇಬಲ್ ಸೇರಿದಿಂತೆ ₹ 6ಸಾವಿರ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ನೀಡಿ ಮಂಗಳವಾರ ತಮ್ಮ ಜನ್ಮ ದಿನವನ್ನು ಮಾದರಿಯಾಗಿ ಆಚರಿಸಿಕೊಂಡಿದ್ದಾರೆ.
ಗೋಕಾಕ ತಾಲ್ಲೂಕಿನ ಮರಡಿಶಿವಾಪುರ ಕೃಷಿಕರಾದ ಮಲ್ಲಪ್ಪ-ಮಂಜುಳಾ ದಂಪತಿ ಪುತ್ರಿ ಇವರು. ಹೋದ ವರ್ಷ ಜನ್ಮ ದಿನದಂದು ₹ 3 ಸಾವಿರ ಮೌಲ್ಯದ ಊಟದ ತಟ್ಟೆಗಳನ್ನು ದೇಣಿಗೆ ನೀಡಿದ್ದರು.
ಪ್ರತಿಯಾಗಿ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಮಹಾಲಕ್ಷ್ಮಿ ಜನ್ಮ ದಿನವನ್ನು ಆಚರಿಸಿ ಶುಭಾಶಯ ಕೋರಿದರು. ಸಿಹಿ ಹಂಚಿದರು.
‘ಜನ್ಮ ದಿನದಂದು ವಿದ್ಯಾರ್ಥಿನಿಯೊಬ್ಬರು ಶಾಲೆಗೆ ದೇಣಿಗೆ ನೀಡುತ್ತಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ’ ಎಂದು ಮುಖ್ಯಶಿಕ್ಷಕ ರಮೇಶ ಅಳಗುಂಡಿ ಹೇಳಿದರು.