ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇದೆಯೆ? ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
‘ಪ್ರಜಾವಾಣಿ’ಯಲ್ಲಿ ಸೋಮವಾರ ಪ್ರಕಟವಾಗಿರುವ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಪ್ರತಿಬಿಂಬಿಸುವ ‘ಬಯಲಲ್ಲೇ ಸ್ನಾನ, ಬಸ್ ಸ್ಟ್ಯಾಂಡ್ ನೆಲೆ’ ಪುಟವನ್ನು ಟ್ವೀಟ್ಗೆ ಟ್ಯಾಗ್ ಮಾಡಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ನರೇಂದ್ರ ಮೋದಿ ಅವರು ಚುನಾವಣೆ ಸಮಯದಲ್ಲಿ ದಿನಕ್ಕೆ ಮೂರು ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ನೆರೆ ಬಂದು 45 ದಿನಗಳು ಕಳೆದಿದ್ದರೂ ಒಂದು ಸ್ಥಳಕ್ಕಾದರೂ ಭೇಟಿ ನೀಡಲು ಸಮಯ ಇಲ್ಲವಾಗಿದೆ’ ಎಂದು ಟೀಕಿಸಿದ್ದಾರೆ.
‘ನೆರೆ ಸಂತ್ರಸ್ತರಿಗೆ ನೆರವು ಕಲ್ಪಿಸುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ. ಸಂಕಷ್ಟಕ್ಕೆ ಸಿಲುಕಿದವರ ಆರೋಗ್ಯ ಹದಗೆಟ್ಟಿದೆ, ಮನೆಗಳು ಕುಸಿದಿವೆ, ದಿನ ನಿತ್ಯದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಆದರೂ ಆಡಳಿತದಲ್ಲಿ ಇರುವವರ ನಿರ್ಲಕ್ಷ್ಯ ಮುಂದುವರಿದಿದೆ’ ಎಂದು ಕುಟುಕಿದ್ದಾರೆ.
ಈವರೆಗೂ ಕೇಂದ್ರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಿಲ್ಲ. ಆದರೂ ರಾಜ್ಯದ ಬಿಜೆಪಿ ನಾಯಕರು ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಕೇಳುತ್ತಿಲ್ಲ. ಅವರು ಎಲ್ಲ ರೀತಿಯ ಮಾನವೀಯತೆ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ಬಗ್ಗೆ ಏಕೆ ಮೃದು ಧೋರಣೆ ತಾಳಿದ್ದಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.