ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯದ ಪ್ರಸ್ತಾವ ಮಂಡನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘15 ಶಾಸಕರು ಸದನದ ಕಲಾಪಕ್ಕೆ ಹಾಜರಾಗುವಂತೆ ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. 12 ಶಾಸಕರು ನಮ್ಮ ಪಕ್ಷದಿಂದ ಆಯ್ಕೆಯಾಗಿದ್ದು, ಕಲಾಪದಲ್ಲಿ ಹಾಜರಾಗುವಂತೆ ವಿಪ್ ನೀಡಲಾಗಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶದಿಂದ ನನ್ನ ಹಕ್ಕು ಮೊಟಕಾಗಿದೆ’ ಎಂದು ಕ್ರಿಯಾಲೋಪ ಎತ್ತಿದ್ದರು. ಇದರ ರೂಲಿಂಗ್ ಅನ್ನು ಸಭಾಧ್ಯಕ್ಷರು ಕಾಯ್ದಿರಿಸಿದ್ದರು.