ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕೆಂಪೇಗೌಡರ ಪ್ರತಿಮೆ, ಉದ್ಯಾನಕ್ಕೆ ಭೂಮಿಪೂಜೆ

108 ಅಡಿ ಎತ್ತರ, 23 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ
Last Updated 27 ಜೂನ್ 2020, 20:06 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಾಣವಾಗಲಿರುವ 108 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ 23 ಎಕರೆ ಪ್ರದೇಶದಲ್ಲಿ ರೂಪುಗೊಳ್ಳಲಿರುವ ಸೆಂಟ್ರಲ್ ಪಾರ್ಕ್‌ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಂಪೇಗೌಡ ಜಯಂತಿಯ ದಿನವಾದ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಬಿ.ಎಸ್.ಯಡಿಯೂರಪ್ಪ, 'ಕೆಂಪೇಗೌಡರ ಜೀವನ ಸಾಧನೆ ಉದ್ಯಾನದಲ್ಲಿ ಅನಾವರಣಗೊಳ್ಳಲಿದೆ. ಅದರ ಕೇಂದ್ರಭಾಗದಲ್ಲಿ ಅವರ ಪ್ರತಿಮೆ ವರ್ಷದೊಳಗೆ ಪ್ರತಿಷ್ಠಾಪನೆಗೊಳ್ಳಲಿದೆ' ಎಂದು ತಿಳಿಸಿದರು.

'ಪಕ್ಷಭೇದವಿಲ್ಲದೆ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಏಕತೆಯಿಂದ ಕಾರ್ಯಕ್ರಮ ಆರಂಭ ಗೊಂಡಿದ್ದು, ಪ್ರತಿಮೆ ಕೆಲಸ ಶೀಘ್ರವಾಗಿ ನಡೆಯಲಿ. ಕಾಮಗಾರಿಗಳು ವೇಗವಾಗಿ ಪೂರ್ಣಗೊಳ್ಳುವಂತೆ ಸರ್ಕಾರ ನೋಡಿಕೊಳ್ಳಬೇಕು' ಎಂದು ಎಚ್.ಡಿ.ದೇವೇಗೌಡ ಹೇಳಿದರು.

ಡಿ.ಕೆ.ಶಿವಕುಮಾರ್, ‘ಇಡೀ ವಿಶ್ವ ಬೆಂಗಳೂರಿನಿಂದ ಭಾರತವನ್ನು ಗುರುತಿಸುತ್ತಿದೆ. ಅಂತರರಾಷ್ಟ್ರೀಯ ಜನತೆಗೆ ಕೆಂಪೇಗೌಡರನ್ನು ಪರಿಚಯಿ ಸುತ್ತಿರುವ ಸರ್ಕಾರಕ್ಕೆ ಅಭಿನಂದನೆಗಳು’ ಎಂದರು.

‘ನದಿಯಿಲ್ಲದ ಜಾಗದಲ್ಲಿ ನಗರ ಸ್ಥಾಪನೆ ಮಾಡುವುದು ಸವಾಲಿನ ಕೆಲಸ. ಆದರೆ, ಕೆಂಪೇಗೌಡರು ಜಲ ಮತ್ತು ಪ್ರಕೃತಿಸ್ನೇಹಿ ನಗರವನ್ನು ನಿರ್ಮಿಸಿದರು. ಎಲ್ಲ ಜನಾಂಗದವರಿಗೆ ಪೇಟೆಗಳನ್ನು ಕಟ್ಟಿದರು. ಈ ಮಹಾಪುರುಷರ ಕಾರ್ಯಗಳು ಸಮಾಜಕ್ಕೆ ಸ್ಫೂರ್ತಿ. ಕೆಂಪೇಗೌಡರ 511ನೇ ಜಯಂತಿಯ ಹಿನ್ನೆಲೆಯಲ್ಲಿ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಚಂದ್ರಶೇಖರ ಸ್ವಾಮೀಜಿ, ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಮೇಯರ್ ಗೌತಮ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ರೈಲ್ವೆ ಖಾತೆರಾಜ್ಯ ಸಚಿವ ಸುರೇಶ್ ಅಂಗಡಿ, ಸಚಿವರಾದ ಗೋಪಾಲಯ್ಯ, ಶಾಸಕರಾದ ಎಲ್.ಎನ್.ನಿಸರ್ಗ ನಾರಾಯಣಸ್ವಾಮಿ, ಎಸ್.ಆರ್.ವಿಶ್ವನಾಥ್ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT