ಮಂಡ್ಯ: ನಾಗಮಂಗಲ ತಾಲ್ಲೂಕು ಬಂಕಾಪುರ ಸಮೀಪ ಭಾನುವಾರ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಪ್ರಯಾಣಿಸುತ್ತಿದ್ದ ಕಾರಿನ ಸಮೀಪವೇ ಕಲ್ಲು ಬಂಡೆ ಸ್ಫೋಟಗೊಂಡಿದೆ. ಸಚಿವರು ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು–ಜಲಸೂರು ಹೆದ್ದಾರಿ ಮೂಲಕ ಸಚಿವರು ಕೆ.ಆರ್.ಪೇಟೆಗೆ ಬರುವಾಗ ಘಟನೆ ನಡೆದಿದೆ. ಹೆದ್ದಾರಿ ಕಾಮಗಾರಿಗಾಗಿ ಕಲ್ಲು ಬಂಡೆ ಸ್ಫೋಟ ಮಾಡಲಾಗುತ್ತಿತ್ತು. ಸ್ಫೋಟಕ್ಕೂ ಮೊದಲು ಮುನ್ಸೂಚನೆ ನೀಡದೆ, ರಸ್ತೆ ಸಂಚಾರ ಬಂದ್ ಮಾಡದೆ ನಿರ್ಲಕ್ಷ್ಯ ವಹಿಸಲಾಗಿತ್ತು.
ರಸ್ತೆ ಬದಿಯ ಕಲ್ಲು ಬಂಡೆ ಸಿಡಿದು ಸಚಿವರ ಕಾರಿನ ಸಮೀಪವೇ ಬಿದ್ದಿದೆ. ಇದರಿಂದ ಭಯಭೀತರಾದ ಕಾರು ಚಾಲಕ ಸ್ವಲ್ಪದೂರ ಹಿಮ್ಮುಖವಾಗಿ ಚಲಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಸಚಿವರು ಗುತ್ತಿಗೆದಾರ ಶ್ರೀನಿವಾಸ್ ವಿರುದ್ದ ಕೆಂಡಾಮಂಡಲರಾದರು. ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದರು.
‘ರಸ್ತೆ ಕಾಮಗಾರಿ ಅನುಮತಿ ಕುರಿತ ದಾಖಲಾತಿ ಪರಿಶೀಲನೆ ಮಾಡಲಾಗುತ್ತಿದೆ. ನಂತರ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದರು.