ಹೂವಿನಹಡಗಲಿ: ತಾಲ್ಲೂಕಿನ ಹೊಳಗುಂದಿ ಗ್ರಾಮದ ಹೊರ ವಲಯ, ಮೋರಿಗೇರಿ ರಸ್ತೆಯಲ್ಲಿ ಯುವ ಪ್ರೇಮಿಗಳಿಬ್ಬರೂ ಗುರುವಾರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಹಗರಿಬೊಮ್ಮನಹಳ್ಳಿ ತಾಲ್ಲೂಕು ಚಿಲುಗೋಡು ಗ್ರಾಮದ ವಾಲ್ಮೀಕಿ ಜನಾಂಗದ ಗುರುರಾಜ (28), ಸೊನ್ನ ಗ್ರಾಮದ ಒಂಬತ್ತನೇ ತರಗತಿ ವಿದ್ಯಾರ್ಥಿನಿ, ಕುರುಬ ಜನಾಂಗದ ಗಂಗಮ್ಮ (16) ಎಂದು ಗುರುತಿಸಲಾಗಿದೆ.
ಬಾಲಕಿ ಗಂಗಮ್ಮನ ತಾಯಿ ತವರೂರು ಚಿಲುಗೋಡು ಆಗಿದ್ದು, ಆಗಾಗ ಅಜ್ಜಿಯ ಮನೆಗೆ ಹೋಗುತ್ತಿದ್ದ ಗಂಗಮ್ಮ ಅದೇ ಗ್ರಾಮದ ಕಟ್ಟಡ ಕಾರ್ಮಿಕ ಗುರುರಾಜ ನಡುವೆ ಪ್ರೇಮಾಂಕುರವಾಗಿದೆ. ಕಳೆದ ಎರಡು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ವಿಷಯ ಎರಡೂ ಕುಟುಂಬದವರಿಗೆ ತಿಳಿದು ಇಬ್ಬರಿಗೂ ಬುದ್ದಿ ಹೇಳಿದ್ದಾರೆ. ಆದರೂ ಇಬ್ಬರು ಪರಸ್ಪರ ಭೇಟಿಯಾಗುವುದನ್ನು ನಿಲ್ಲಿಸಿರಲಿಲ್ಲ ಎನ್ನಲಾಗಿದೆ. ಬಾಲಕಿ ಅಪ್ರಾಪ್ತೆ ಎಂಬ ವಿಷಯವನ್ನು ಮುಖ್ಯವಾಗಿಸಿ, ಕುಟುಂಬದವರು ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದರಿಂದ ಮನನೊಂದ ಪ್ರೇಮಿಗಳು ಹೊಳಗುಂದಿ ಗ್ರಾಮದ ಮೋರಿಗೇರಿ ರಸ್ತೆ ಬದಿಯ ಹೊಲವೊಂದರಲ್ಲಿದ್ದ ಬನ್ನಿ ಮರಕ್ಕೆ ಒಂದೇ ಹಗ್ಗಕ್ಕೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಸಿಪಿಐ ಮಾಲತೇಶ ಕೂನಬೇವು, ಪಿಎಸ್ಐ ಎಸ್.ಪಿ,ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಹೂವಿನಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.