ಕೊಪ್ಪಳ: ಇಲ್ಲಿನ ರೈಲು ನಿಲ್ದಾಣದ ರಸ್ತೆಯ ಮಸೀದಿಯಲ್ಲಿಜಮಾಅತ್ ಇಸ್ಲಾಮಿ ಹಿಂದ್ ಸಂಘಟನೆಯು ಭಾನುವಾರ ಆಯೋಜಿಸಿದ್ದ ‘ಮಸೀದಿ ಸಂದರ್ಶನ’ದಲ್ಲಿ ಮಹಿಳೆಯರು ಮತ್ತು ಅನ್ಯಧರ್ಮೀಯರು ಪಾಲ್ಗೊಂಡರು. ಮಸೀದಿಯಲ್ಲಿನ ಚಟುವಟಿಕೆಗಳನ್ನು ಅರಿತುಕೊಂಡರು.
ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರು ಮಸೀದಿ ಪ್ರವೇಶಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘಟನೆಯ ಕಾರ್ಯದರ್ಶಿ ಮಹಮ್ಮದ್ ಕುಂಇ ಅವರು ನಮಾಜ್, ಅಂಗಶುದ್ಧಿ ಸೇರಿದಂತೆ ಮಸೀದಿಯಲ್ಲಿ ನಡೆಯುವ ವಿಧಿವಿಧಾನಗಳ ಕುರಿತು ಮಾಹಿತಿ ನೀಡಿದರು.
ಮಹಿಳೆಯರು ಮಸೀದಿ ಪ್ರವೇಶಿಸಿ ನಮಾಜ್, ಅಂಗಶುದ್ಧಿ ಮಾಡುವ ಸ್ಥಳಗಳನ್ನು ವೀಕ್ಷಿಸಿದರು. ಅನ್ಯಧರ್ಮದ ಪುರುಷರು ಹಾಗೂ ಮಹಿಳೆಯರೂ ಕೂಡಾ ಮಸೀದಿ ವೀಕ್ಷಿಸಿದರು. ಮಸೀದಿ ಕುರಿತ ಕುತೂಹಲ ತಣಿಸಿ, ಅನುಮಾನ ದೂರ ಮಾಡಿಕೊಂಡರು.
‘ಸಮಾಜದಲ್ಲಿ ಮತ್ತು ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಇದೆ. ಆದರೆ ಈವರೆಗೆ ಮಸೀದಿಯೊಳಗೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ಇರಲಿಲ್ಲ. ಇಲ್ಲಿ ಅವಕಾಶ ಕಲ್ಪಿಸಿದ್ದು ಸ್ವಾಗತಾರ್ಹ’ ಎಂದು ಸಂಘಟನೆಯ ಕಾರ್ಯಕರ್ತೆ ಸಬಿಹಾ ಪಟೇಲ್ ತಿಳಿಸಿದರು.
‘ಮಸೀದಿ ಸಂದರ್ಶನದ ಮೂಲಕ ಎಲ್ಲರೊಂದಿಗೆಬಾಂಧವ್ಯ, ಭ್ರಾತೃತ್ವ ಮತ್ತು ಸೌಹಾರ್ದ ಬೆಳೆಸುವ ಉದ್ದೇಶವಿದೆ. ಮಹಿಳೆಯರಿಗೆ ನಮಾಜ್ ಮಾಡಲು ಪ್ರತ್ಯೇಕ ಅವಕಾಶ ಕಲ್ಪಿಸಿದ್ದೇವೆ’ ಎಂದು ಮಹಮ್ಮದ್ ಕುಂಞ ತಿಳಿಸಿದರು.