ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರಿಗೆ ಸರಿಯಾಗಿ ವೇತನ ಕೊಡಲೂ ಆಗುತ್ತಿಲ್ಲ: ಲಕ್ಷ್ಮಣ ಸವದಿ

Last Updated 29 ಫೆಬ್ರುವರಿ 2020, 12:14 IST
ಅಕ್ಷರ ಗಾತ್ರ

ಕಾರವಾರ: 'ರಾಜ್ಯ ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳಲ್ಲಿ ಅಂದಾಜು ₹4 ಸಾವಿರ ಕೋಟಿಗಳಷ್ಟು ನಷ್ಟದಲ್ಲಿವೆ. ಇದರಿಂದ ನೌಕರರಿಗೆ ವೇತನ, ಬಸ್‌ಗಳ ಡೀಸೆಲ್ ಬಿಲ್‌ಗಳನ್ನು ಸರಿಯಾದ ಸಮಯಕ್ಕೆ ಪಾವತಿಸಲು ಸಾಧ್ಯವಾಗುತ್ತಿಲ್ಲ' ಎಂದು ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಹೊನ್ನಾವರದಲ್ಲಿ ಸರ್ಕಾರಿ ಬಸ್ ನಿಲ್ದಾಣದ ನೂತನ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, 'ನಿಗಮಗಳು ನಷ್ಟದಲ್ಲಿರಲು ಚಾಲಕರು, ನಿರ್ವಾಹಕರು ಕಾರಣವಲ್ಲ. ಅವರು ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯಲ್ಲಿ ಎಲ್ಲೆಲ್ಲಿ ಹಣ ಸೋರಿಕೆಯಾಗುತ್ತಿದೆ ಎಂದು ಗೊತ್ತಿದೆ. ಅದನ್ನು ತಡೆದು ಮುಂದಿನ ಮೂರು ವರ್ಷಗಳಲ್ಲಿ ಲಾಭದಾಯಕವನ್ನಾಗಿ ಮಾಡಿ ತೋರಿಸುತ್ತೇವೆ' ಎಂದರು.

'ಸಾರಿಗೆ ಇಲಾಖೆಗೆ ಸುಮಾರು 4 ಸಾವಿರ ಹೊಸ ಬಸ್‌ಗಳು ಬೇಕಿವೆ. 12,00 ಬಸ್‌ಗಳನ್ನು ಖರೀದಿ ಮಾಡಲಾಗಿದೆ. ಈ ಬಾರಿ ಬ್ಯಾಟರಿ ಚಾಲಿತ ಬಸ್‌ಗಳಿಗೆ ಆದ್ಯತೆ ನೀಡಲಾಗುತ್ತದೆ. ಅವುಗಳ ಪೂರೈಕೆಗೆ ವಿದೇಶಗಳ ಹಲವು ಕಂಪನಿಗಳು ಮುಂದೆ ಬಂದಿವೆ' ಎಂದರು.

'ಬಸ್‌ಗಳನ್ನು ಪೂರೈಸಿದ ಸಂಸ್ಥೆಗಳೇ ಅವುಗಳ ನಿರ್ವಹಣೆಯನ್ನೂ ಮಾಡಲಿವೆ. ಇದರಲ್ಲಿ ಬರುವ ಆದಾಯದಲ್ಲಿ ಶೇ 60ರಷ್ಟನ್ನು ತಾವು ಪಡೆದುಕೊಂಡು, ಶೇ 40ರಷ್ಟನ್ನು ಸರ್ಕಾರಕ್ಕೆ ನೀಡಲು ಮುಂದಾಗಿವೆ. ಬ್ಯಾಟರಿ ಚಾರ್ಜ್ ಮಾಡಲು ಸ್ಥಳ ನೀಡುವಂತೆ ಮಾತ್ರ ಕೇಳಿವೆ. ಈ ಸಾಧ್ಯತೆಯ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ' ಎಂದು ಮಾಹಿತಿ ನೀಡಿದರು.

'ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬುದು ಬಹುದಿನಗಳ ಬೇಡಿಕೆ. ಅವರಿಗೆ ನಿಗಮ ನಷ್ಟವಾದರೆ ಜೀವನಕ್ಕೆ ಭದ್ರತೆಯಿಲ್ಲ ಎಂಬ ಆತಂಕವಿದೆ. ಈ ಸಂಬಂಧ ಸಮಿತಿಯೊಂದನ್ನು ಮುಖ್ಯಮಂತ್ರಿ ರಚನೆ ಮಾಡಿದ್ದಾರೆ. ಹೊರ ರಾಜ್ಯಗಳಲ್ಲಿ ಮತ್ತು ನಮ್ಮಲ್ಲಿ ಎಷ್ಟು ಹಣಕಾಸಿನ ಹೊರೆಯಾಗುತ್ತದೆ ಎಂದು ಪರಿಶೀಲಿಸಬೇಕು. ಸರ್ಕಾರಿ ನೌಕರರಾದ ಬಳಿಕ ಏನೇನು ಸೌಲಭ್ಯಗಳನ್ನು ಕೊಡಬೇಕು ಎಂಬ ಬಗ್ಗೆ ಅವಲೋಕನ ಮಾಡಲು ಸೂಚಿಸಿದ್ದಾರೆ. ವರದಿ ಬಂದ ಮೇಲೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡ್ತೇನೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

'ಸಾರಿಗೆ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ, ಭತ್ಯೆ, ಗ್ರಾಚ್ಯುಟಿ, ಪಿ.ಎಫ್ ಸಿಕ್ತಿಲ್ಲ. ಸರ್ಕಾರದಿಂದ ಸುಮಾರು 3,000 ಕೋಟಿ ಬರಬೇಕಿದೆ. ಅದನ್ನು ಆದಷ್ಟು ಬೇಗ ಪಡ್ಕೊಂಡು ನೌಕರರ ವೇತನ ಮುಂತಾದವನ್ನು ಕೊಡಲು ಆದ್ಯತೆ ನೀಡಲಾಗಿದೆ. ಜೊತೆಗೇ ಆಗುತ್ತಿರುವ ಹಣಕಾಸು ಸೋರಿಕೆ ತಡೆದು ಇಲಾಖೆಯನ್ನು ಲಾಭದಾಯಕ ಮಾಡಿದಾಗ ಕಾರ್ಮಿಕರಿಗೆ ಸಮಾಧಾನವಾಗುತ್ತದೆ. ಈ ಸವಾಲನ್ನು ಸ್ವೀಕರಿಸಿದ್ದೇವೆ' ಎಂದೂ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT