ತೋವಿನಕೆರೆ (ಕೊರಟಗೆರೆ ತಾ.): ‘ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಕ್ಷೇತ್ರಕ್ಕೆ ಸೇರಿರುವ ತೋವಿನಕೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಯಾಗಿದೆ. ಈ ಸಮಸ್ಯೆ ಸರಿಪಡಿಸಿ’ ಎಂದು 7ನೇ ತರಗತಿ ವಿದ್ಯಾರ್ಥಿನಿ ಎನ್.ಎಚ್.ಪುಷ್ಪಾ ಎಂಬಾಕೆ ಮುಖ್ಯಮಂತ್ರಿಗೆ ಪತ್ರ ಬರೆದು ಗಮನ ಸೆಳೆದಿದ್ದಾಳೆ.
ಆದರೆ, ಈ ಸಮಸ್ಯೆ ಬಗೆಹರಿಸುವಂತೆ ಸಿಎಂ ಕಚೇರಿಯಿಂದ ಸೂಚನೆ ಬಂದು 3 ತಿಂಗಳಾದರೂ ಇನ್ನೂ ಶಾಲೆಗೆ ಶಿಕ್ಷಕರು ನೇಮಕಗೊಂಡಿಲ್ಲ.
ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ, ‘ಈ ವರ್ಷ ಶಾಲೆ ಆರಂಭವಾದಂದಿನಿಂದಲೂ 6, 7, 8ನೇ ತರಗತಿಗಳಿಗೆ ವಿಜ್ಞಾನ ಮತ್ತು ಗಣಿತ ಪಾಠ ಮಾಡಲು ಶಿಕ್ಷಕರು ಇಲ್ಲ. ಇದರಿಂದ ಓದಲು ತೊಂದರೆಯಾಗಿದೆ. ಕೂಡಲೇ ಶಿಕ್ಷಕರನ್ನು ನೇಮಿಸಿ’ ಎಂದು ಪುಷ್ಪಾ ಪತ್ರ ಬರೆದಿದ್ದಳು.
ಮುಖ್ಯಮಂತ್ರಿ ಕಚೇರಿಯ ಉಪ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಮಸ್ಯೆಯನ್ನು ಸರಿಪಡಿಸಿ ವರದಿ ನೀಡುವಂತೆ ಆಗಸ್ಟ್ 14ರಂದು ಪತ್ರ ಬರೆದು ಸೂಚಿಸಿದ್ದಾರೆ. ಆದರೆ, ಮೂರು ತಿಂಗಳು ಕಳೆದರೂ ಇಲಾಖೆ ಖಾಲಿಯಾಗಿರುವ ಶಿಕ್ಷಕರ ಸ್ಥಾನಗಳನ್ನು ತುಂಬುವ ಕಡೆ ಗಮನ ಹರಿಸುತ್ತಿಲ್ಲ.
***
ಸರ್ಕಾರಿಗೆ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಸರ್ಕಾರ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಶಿಕ್ಷಕರನ್ನು ನಿಯೋಜಿಸದಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ. -ಎನ್.ಎಚ್.ಪುಷ್ಪಾ, ವಿದ್ಯಾರ್ಥಿನಿ