ಸಿದ್ದಾಪುರ: ತಾಲ್ಲೂಕಿನ ಹಂಜಗಿಯ ಮಾರುತಿ ನಾರಾಯಣ ನಾಯ್ಕ ತಮ್ಮ ಅಡಿಕೆ ತೋಟಕ್ಕಾಗಿ ಕೊರೆಸಿದ್ದ ಕೊಳವೆಬಾವಿ ನೀರನ್ನು ಸಾರ್ವಜನಿಕರಿಗೆ ಕೊಡುತ್ತಿದ್ದಾರೆ.
ಹಂಜಗಿಯಲ್ಲಿ ಸುಮಾರು 65 ಮನೆಗಳಿವೆ. 60 ಮನೆಗಳ ಜನರು ಈ ನಳ ಸಂಪರ್ಕದ ಫಲಾನುಭವಿಗಳು. ಪಂಚಾಯ್ತಿ ತೆಗೆದಿದ್ದ ಕೊಳವೆಬಾವಿಯಲ್ಲಿ ಹೂಳುತುಂಬಿ, ನೀರು ಬರುವುದು ನಿಂತಾಗ, ಆ ಪೈಪ್ ಸಂಪರ್ಕವನ್ನು ತಮ್ಮ ತೋಟದ ಕೊಳವೆಬಾವಿಗೆ ಅಳವಡಿಸಿ, ಊರಿಗೆ ನೀರು ಹಂಚಿದವರು ಶಿರಳಗಿ ಪಂಚಾಯ್ತಿ ಸದಸ್ಯ ಮಾರುತಿ.
‘ಮೂರು ವರ್ಷಗಳ ಹಿಂದೆ ತೆಗೆದಿರುವ ಕೊಳವೆಬಾವಿಯಲ್ಲಿ ಚೆನ್ನಾಗಿ ನೀರಿದೆ. ಜನರಿಗೆ ನೀರು ನೀಡುವುದರಿಂದ ನನ್ನ ತೋಟಕ್ಕೇನೂ ಸಮಸ್ಯೆಯಾಗಲಿಲ್ಲ. ಇದೊಂದು ಮಾನವೀಯತೆ ಕಾರ್ಯ. ಜನಪ್ರತಿನಿಧಿಯಾಗಿ ನೀರು ಕೊಡುವ ಜವಾಬ್ದಾರಿ ಕೂಡ ನನ್ನ ಮೇಲಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
‘ಪ್ರತಿ ಎರಡು ದಿನಗಳಿಗೊಮ್ಮೆ ಪುರಸಭೆ ಜನರಿಗೆ ನೀರು ಕೊಡುತ್ತಿದೆ. ಮಾರುತಿ ಅವರು ಸಹಾಯ ಮಾಡದಿದ್ದರೆ, ಈ ಊರಿನಲ್ಲಿ ಸಮಸ್ಯೆ ತೀವ್ರವಾಗುತ್ತಿತ್ತು. ಬಾವಿಗಳು ಸಹ ಬತ್ತಿವೆ’ ಎನ್ನುತ್ತಾರೆ ಪಿಡಿಒ ಗೌರೀಶ್.