ಬೆಂಗಳೂರು: ‘ಈ ಡೈರಿಯಲ್ಲಿ ನಮೂದಾಗಿರುವ ವಿಷಯದ ಬಗ್ಗೆ ಜಾರಿ ನಿರ್ದೇಶನಾಲಯದ (ಇಡಿ) ಉನ್ನತ ತನಿಖೆ ಅಗತ್ಯವಿದೆಯೇ?’ ಎಂದು ಯಡಿಯೂರಪ್ಪ ಡೈರಿಯಲ್ಲಿರುವ ವಿಷಯಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಸಲ್ಲಿಸಿದ್ದ ಕಡತದ ಮೇಲೆ ಟಿಪ್ಪಣಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿ ಬರೆದಿದ್ದರು ಎಂದು ‘ದಿ ಕ್ಯಾರವಾನ್’ ವರದಿ ಮಾಡಿದೆ.
ಆದರೆ ಆಗಸ್ಟ್ 2017ರಿಂದ ಡೈರಿಯಲ್ಲಿರುವ ಮಾಹಿತಿಯ ಅರಿವಿದ್ದರೂ ಆದಾಯ ತೆರಿಗೆ ಇಲಾಖೆಯಾಗಲೀ, ಕೇಂದ್ರ ಸರ್ಕಾರವಾಗಲೀ ಏನೂ ಮಾಡಲಿಲ್ಲ. ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅರುಣ್ ಜೇಟ್ಲಿ ಅವರಿಗೆ ಸಲ್ಲಿಸಿದ ಕಡತದ ಮೇಲೆ ಮೇಲಿನಂತೆ ಟಿಪ್ಪಣಿ ಬರೆದಿದ್ದರೂ ಯಾವುದೇ ಕ್ರಮ ವಹಿಸಲಿಲ್ಲ. ಜೇಟ್ಲಿ ಅವರೂ ಯಡಿಯೂರಪ್ಪ ಅವರಿಂದ ₹150 ಕೋಟಿ ಪಡೆದಿದ್ದರು ಎನ್ನುವ ಉಲ್ಲೇಖ ಡೈರಿಯಲ್ಲಿದೆ ಎಂದು ಕ್ಯಾರವಾನ್ ಹೇಳಿದೆ. ಜೇಟ್ಲಿ ಅವರು 2004ರಿಂದ 2013ರವರೆಗೆ ಬಿಜೆಪಿಯ ಕರ್ನಾಟಕ ರಾಜ್ಯ ಘಟಕದ ಉಸ್ತುವಾರಿಯಾಗಿದ್ದರು.
ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಹಣ ನೀಡಿರುವ ಮಾಹಿತಿಯ ಜೊತೆಗೆ 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ನೆರವಾದ ಶಾಸಕರಿಗೆ ಹಣ ಪಾವತಿಸಿದ ಉಲ್ಲೇಖವೂ ಡೈರಿಯಲ್ಲಿದೆ. ‘ನನ್ನನ್ನು ಮುಖ್ಯಮಂತ್ರಿಯಾಗಿಸಿದ ಪ್ರಮುಖ ವ್ಯಕ್ತಿ ಗಾಲಿ ಜನಾರ್ದನರೆಡ್ಡಿ’ ಎಂದು ಡೈರಿಯಲ್ಲಿ ನಮೂದಾಗಿದೆ. ಇದರ ನಂತರದ ಸಾಲಿನಲ್ಲಿ ‘ಜನಾರ್ದನ ರೆಡ್ಡಿ ಹಣ ಕೊಟ್ಟವರ ಪಟ್ಟಿ’ ಎಂದು ಮತ್ತಷ್ಟು ನಮೂದುಗಳು ಇವೆ ಎಂದು ಕ್ಯಾರವಾನ್ ಹೇಳಿದೆ
ಪಿ.ಎಂ. ನರೇಂದ್ರಸ್ವಾಮಿ, ಆನಂದ್ ಆಸ್ನೋಟಿಕರ್ ವಸಂತ್, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಎಂಟು ಮಂದಿಗೆ ಒಟ್ಟು ₹150 ಕೋಟಿ ಪಾವತಿಸಲಾಗಿದೆ. ಪ್ರತಿಯೊಬ್ಬರ ಹೆಸರಿನ ಮುಂದೆಯೂ ಇಂತಿಷ್ಟು ಕೋಟಿ ಎನ್ನುವ ನಮೂದು ಇದೆ. ಇದರಲ್ಲಿ ಜಾರಕಿಹೊಳಿ ಅವರ ಹೆಸರಿನ ಎದುರು ₹10 ಕೋಟಿ ಎನ್ನುವ ಉಲ್ಲೇಖವಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಕ್ಯಾರವಾನ್ನ ವರದಿಗಾರರು ಎಲ್ಲ ಎಂಟು ಮಂದಿಯನ್ನು ಸಂಪರ್ಕಿಸಲು ಯತ್ನಿಸಿದರು. ಆದರೆ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಕ್ಯಾರವಾನ್ ವರದಿ ಉಲ್ಲೇಖಿಸಿದೆ.
‘ನಾನು ಪಡೆದುಕೊಂಡ / ನನಗೆ ಕೊಟ್ಟ ಹಣ’ ಎನ್ನುವ ಪಟ್ಟಿಯಲ್ಲಿ ₹5ರಿಂದ ₹500 ಕೋಟಿವರೆಗಿನ ನಮೂದುಗಳಿವೆ. ಬಸವರಾಜ ಬೊಮ್ಮಾಯಿ, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಕೆ.ಸುಬ್ರಹ್ಮಣ್ಯ ನಾಯ್ಡು, ಜೆ.ಕೃಷ್ಣ ಪಾಲೇಮಾರ್, ಸಿ.ಸಿ.ಪಾಟೀಲ್ ಮತ್ತು ಲಕ್ಷ್ಮಣ ಸವದಿ ಸೇರಿದಂತೆ ಹಲವರ ಹೆಸರುಗಳು ಡೈರಿಯಲ್ಲಿವೆ. ಹಲವರಿಂದ ಯಡಿಯೂರಪ್ಪ ಅವರಿಗೆ ₹2,690 ಕೋಟಿ ಸಂದಾಯವಾಗಿರುವುದು ಡೈರಿಯಿಂದ ತಿಳಿದುಬರುತ್ತದೆ ಎಂದು ಕ್ಯಾರವಾನ್ ಹೇಳಿದೆ.
ಇನ್ನಷ್ಟು ಸುದ್ದಿಗಳು
*ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ಲಂಚ ಕೊಟ್ಟ ಯಡಿಯೂರಪ್ಪ: ಕ್ಯಾರವಾನ್
*ಯಡಿಯೂರಪ್ಪ–ಶೋಭಾ ಮದುವೆ ಕಥೆಯೂ ಡೈರಿಯಲ್ಲಿದೆ
*ಯಡಿಯೂರಪ್ಪ ಡೈರಿ 2 ವರ್ಷದಿಂದ ಕೈಲಿದ್ರೂ ಡಿಕೆಶಿ ಏನೂ ಮಾಡಲಿಲ್ಲ
*ಯಡಿಯೂರಪ್ಪ ಪ್ರತಿಕ್ರಿಯೆ– ಕಾಂಗ್ರೆಸ್ನದ್ದು ಯುದ್ಧ ಶುರುವಾಗುವ ಮುನ್ನವೇ ಸೋತ ಪರಿಸ್ಥಿತಿ
*ಕೇಂದ್ರ ನಾಯಕರಿಗೆ ₹1800 ಕೋಟಿ ಪಾವತಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.