ನಾನೇನು ಸನ್ಯಾಸಿಯಲ್ಲ; ಅತೃಪ್ತರು ಹೊರಬಂದರೆ ಸರ್ಕಾರ ರಚನೆಗೆ ಸಿದ್ಧ: ಯಡಿಯೂರಪ್ಪ

ಬೆಂಗಳೂರು: ‘ನಾನೇನು ಸನ್ಯಾಸಿಯಲ್ಲ, ಮೈತ್ರಿ ಸರ್ಕಾರ ತಾನಾಗಿಯೇ ಪತನವಾದರೆ ಸರ್ಕಾರ ರಚಿಸಲು ಸಿದ್ಧ’ ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಆನಂದಸಿಂಗ್ ರಾಜೀನಾಮೆ ಕುರಿತು ಮಾಧ್ಯಮದಲ್ಲಿ ನೋಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದು ಹೇಳಿದರು.
‘ಸರ್ಕಾರ ಪತನ ಮಾಡುವುದಕ್ಕೆ ಯಾವುದೇ ತಂತ್ರಗಾರಿಕೆ ಮಾಡಿಲ್ಲ, ಮಾಡುವುದೂ ಇಲ್ಲ. ಸಮ್ಮಿಶ್ರ ಸರ್ಕಾರದಲ್ಲಿ 20 ಶಾಸಕರು ಅತೃಪ್ತಿ ಹೊಂದಿರುವುದು ನಿಜ. ಅವರೆಲ್ಲ ಮೈತ್ರಿ ಸರ್ಕಾರದಿಂದ ಹೊರ ಬರಲಿ ನೋಡೋಣ. ಕಾದು ನೋಡುತ್ತೇವೆ’ ಎಂದು ತಿಳಿಸಿದರು.
‘20 ಶಾಸಕರ ನಿರ್ಧಾರದ ಮೇಲೆ ಸರ್ಕಾರದ ಭವಿಷ್ಯ ಅಡಗಿದೆ. ಅಂತಹ ಸಂದರ್ಭದಲ್ಲಿ ಒಟ್ಟಾಗಿ ಸರ್ಕಾರ ಮಾಡುತ್ತೇವೆ. ಮಧ್ಯಂತರ ಚುನಾವಣೆ ನಡೆಯುವುದಿಲ್ಲ’ ಎಂದರು.
‘ರಾಜ್ಯದ 81 ತಾಲ್ಲೂಕುಗಳಲ್ಲಿ ಮಳೆಯ ತೀವ್ರ ಕೊರತೆ ಆಗಿದೆ. ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದ್ದರೂ ಮುಖ್ಯಮಂತ್ರಿಯವರು ಅಮೆರಿಕಕ್ಕೆ ಹೋಗಿ ಕುಳಿತ್ತಿದ್ದಾರೆ’ ಎಂದರು.
‘ಜನರಿಗೆ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಇದರ ಪರಿಹಾರಕ್ಕೆ ಮುಖ್ಯಮಂತ್ರಿಯಾಗಲಿ, ಸಚಿವರು, ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ’ ಎಂದು ಅವರು ಹೇಳಿದರು.
‘ವಾಣಿಜ್ಯ ಬೆಳೆಗಳಾದ ತೆಂಗು,ಅಡಿಕೆ,, ಕಬ್ಬು ನೀರಿಲ್ಲದೇ ಒಣಗುತ್ತಿವೆ. ಮಂಡ್ಯದಲ್ಲಿ ರೈತರು ಇದ್ದ ಅಲ್ಪಸ್ವಲ್ಪ ನೀರನ್ನು ಬೆಳೆಗಳಿಗೆ ಪಡೆಯಲಾಗದೆ, ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಭೂ ಒತ್ತವರಿ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಕೆಲಸ ನಡೆದಿದೆ. ಇದಕ್ಕೆ ತಡೆ ಒಡ್ಡಬೇಕು’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.