ಚಿತ್ರದುರ್ಗ: ಪಾಕಿಸ್ತಾನದ ಬಾಲಾಕೋಟ್ನಲ್ಲಿರುವ ಉಗ್ರರ ನೆಲೆಗಳ ಮೇಲೆ ಸೇನೆಯು ನಡೆಸಿದ ವಾಯುದಾಳಿಯಿಂದ ಬಿಜೆಪಿಗೆ ನೆರವಾಗಲಿದ್ದು, ಇದರಿಂದ ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
‘ಇತ್ತೀಚೆಗೆ ಸೇನಾಪಡೆಗಳು ಪಾಕಿಸ್ತಾನದಲ್ಲಿ ನಡೆಸಿದ ದಾಳಿಯು ನರೇಂದ್ರ ಮೋದಿ ಅವರ ಪರವಾಗಿ ಕಾರ್ಯನಿರ್ವಹಿಸಲಿದೆ. ದಾಳಿಯು ಯುವಜನರಲ್ಲಿ ಸಂತಸ ಮೂಡಿಸಿದೆ. ಹೀಗಾಗಿ ಇದು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ’ ಎಂದಿದ್ದಾರೆ. ಈ ಬಗ್ಗೆ ಎಎನ್ಐ ವರದಿ ಮಾಡಿದೆ.
ಕರ್ನಾಟಕವು ಲೋಕಸಭೆಯಲ್ಲಿ 28 ಸ್ಥಾನ ಬಲ ಹೊಂದಿದ್ದು, 2014ರ ಚುನಾವಣೆಯಲ್ಲಿ ಬಿಜೆಪಿ 16 ಕಾಂಗ್ರೆಸ್ 10 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಕಂಡಿದ್ದವು.
ಭಾರತೀಯವಾಯುಪಡೆಯು ಜೈಷ್–ಎ–ಮೊಹಮದ್(ಜೆಇಎಂ) ಉಗ್ರರನ್ನು ಗುರಿಯಾಗಿರಿಸಿ, ಸಂಘಟನೆಯ ಶಿಬಿರಗಳ ಮೇಲೆ ಮಂಗಳವಾರ ದಾಳಿ ನಡೆಸಿತ್ತು. ದಾಳಿ ವೇಳೆ 350ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮಾಹಿತಿ ನೀಡಿದ್ದರು.
ಇದಕ್ಕೂ ಮುನ್ನ ಫೆಬ್ರುವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರನ್ನು ಗುರಿಯಾಗಿರಿಸಿ ಜೆಇಎಂ ಆತ್ಮಾಹುತಿ ದಾಳಿ ಸಂಘಟಿಸಿತ್ತು. ಪರಿಣಾಮ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು.