ಬೆಂಗಳೂರು: ‘ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಈಶ್ವರನ್ ಕೊಟ್ಟಿರುವ ಉಡುಗೊರೆ ಯಾವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಬೇಕು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ಸೋಮವಾರ ಆಯೋಜಿಸಿದ್ದ ‘ಮಾತು–ಮಂಥನ’ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿ, ‘ಅದು ಹುಬ್ಲೊ ವಾಚ್ ಎಂಬ ಅನುಮಾನ ಇದೆ. ಚೆಂಡು ಈಗ ಸಿದ್ದರಾಮಯ್ಯ ಅವರ ಅಂಗಳದಲ್ಲಿ ಇದೆ. ಅವರು ಉತ್ತರ ನೀಡಬೇಕು’ ಎಂದರು.
‘ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಮಾತ್ರ ಸ್ಟಾರ್ ಪ್ರಚಾರಕರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಕೆಲವು ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷರ ಸುದ್ದಿಯೇ ಇಲ್ಲ. ಜನರಿಗೆ ಕಾಂಗ್ರೆಸ್ಗಿಂತ ಸಿದ್ದರಾಮಯ್ಯ ಮೇಲೆ ಹೆಚ್ಚು ಸಿಟ್ಟು ಇದೆ’ ಎಂದರು.
‘ಕಳೆದ ಚುನಾವಣೆಯಲ್ಲಿ ಚುನಾವಣಾ ನಿರ್ವಹಣೆ ಹೊಣೆಯನ್ನು ಅರವಿಂದ ಲಿಂಬಾವಳಿ ಹೊತ್ತಿದ್ದರು. ಈ ಸಲ ಕ್ಷೇತ್ರ ಬಿಟ್ಟು ಬರಲು ಆಗುವುದಿಲ್ಲ ಎಂದು ಅವರು ಹೇಳಿದ್ದರು. ಹಾಗಾಗಿ ಆ ಹೊಣೆ ನನಗೆ ಬಂದಿದೆ. ಹೀಗಾಗಿ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಾನೇ ಹೇಳಿದ್ದೆ’ ಎಂದರು.