ನವದೆಹಲಿ: ವಾಟ್ಸ್ಆ್ಯಪ್ನ ಖಾಸಗಿತನದ ಹೊಸ ನೀತಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ಗೆ ನ್ಯಾಯಾಲಯವು ಬುಧವಾರ ಸೂಚಿಸಿದೆ.
ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ.ಎನ್ ಪಟೇಲ್, ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ಪೀಠವು ಕೇಂದ್ರ, ಫೇಸ್ಬುಕ್ ಮತ್ತು ವ್ಯಾಟ್ಸ್ಆ್ಯಪ್ಗೆ ನೋಟಿಸ್ ಜಾರಿ ಮಾಡಿದ್ದು, ಮೇ 13ರೊಳಗೆ ತಮ್ಮ ನಿಲುವನ್ನು ತಿಳಿಸುವಂತೆ ಸೂಚಿಸಿದೆ.
‘ಬಳಕೆದಾರರ ಖಾಸಗಿ ಸಂಭಾಷಣೆಗಳು ಸುರಕ್ಷಿತವಾಗಿದ್ದು, ಅವುಗಳನ್ನು ಎಂಡ್–ಟು–ಎಂಡ್ ಎನ್ಕ್ರಿಪ್ಷನ್ ಮಾಡಲಾಗಿದೆ’ ಎಂದು ವ್ಯಾಟ್ಸ್ಆ್ಯಪ್, ಪೀಠಕ್ಕೆ ತಿಳಿಸಿದೆ.
‘ವ್ಯಾಟ್ಸ್ಆ್ಯಪ್ ಮೇ 15ರಿಂದ ಖಾಸಗಿತನದ ಹೊಸ ನೀತಿಯನ್ನು ಜಾರಿಗೆ ತರಲಿದೆ. ಹಾಗಾಗಿ ನ್ಯಾಯಾಲಯವು ಮಧ್ಯಂತರ ಆದೇಶವನ್ನು ಹೊರಡಿಸಬೇಕು’ ಎಂದು ಅರ್ಜಿದಾರ ಹರ್ಷ ಗುಪ್ತಾ ಅವರು ಮನವಿ ಮಾಡಿದ್ದಾರೆ. ಈ ಬಗೆಗಿನ ಅರ್ಜಿ ವಿಚಾರಣೆಯನ್ನು ಮೇ 13ಕ್ಕೆ ನಿಗದಿ ಮಾಡಲಾಗಿದೆ.