ಪರಿಸರದ ಪಾಠ ಮನೆಯಿಂದ ಆರಂಭವಾಗಬೇಕು, ಆ ಬೋಧನೆಗೆ ಶಾಲೆ ನೀರೆರೆಯಬೇಕು. ವಿದ್ಯಾರ್ಥಿದೆಸೆಯಲ್ಲಿ ಪರಿಸರ ಪ್ರಜ್ಞೆ ಮನಸ್ಸಿಗಿಳಿದರೆ, ಮುಂದೆ ಪ್ರಕೃತಿ ಉಳಿಸಲು, ರಕ್ಷಿಸಲು, ಸಮೃದ್ಧಿಗೊಳಿಸಲು ಸ್ಫೂರ್ತಿಯಾಗುತ್ತದೆ. ಇಂತಹ ಪ್ರೇರಕ ಶಕ್ತಿ ಗಟ್ಟಿಯಾಗಬೇಕೆಂದರೆ ಅದಕ್ಕೆ ಮೊಳಕೆಯಲ್ಲೇ ಬೆನ್ನೆಲುಬಾಗಬೇಕು.. ಪುಸ್ತಕದಲ್ಲೋ, ಉದ್ಯಾನದಲ್ಲೋ ಗಿಡ–ಮರಗಳ ಬಗ್ಗೆ ಹೇಳಿದರೆ ಎಲ್ಲವೂ ಮನಕ್ಕಿಳಿಯುವುದಿಲ್ಲ. ಹೀಗಾಗಿಯೇ ಇಲ್ಲಿ ಸ್ಥಾಪನೆಯಾಗಿದೆ ವೃಕ್ಷವನ. ರಾಜಧಾನಿಯ ರಾಜರಾಜೇಶ್ವರಿನಗರ ಹಸಿರು ಸಾಮ್ರಾಜ್ಯಕ್ಕೆ ಹೆಸರುವಾಸಿ. ಇದೇ ರಾಜರಾಜೇಶ್ವರಿನಗರದಲ್ಲಿರುವ ನ್ಯಾಷನಲ್ ಎಜುಕೇಷನ್ ಫೌಂಡೇಷನ್ನ ಎರಡು ಶಾಲೆ ಹಾಗೂ ಒಂದು ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಸೃಷ್ಟಿಯಾಗಿವೆ ವೃಕ್ಷವನಗಳು.