ರಾಮ್ಪುರ (ಉತ್ತರ ಪ್ರದೇಶ): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದ ರಾಮ್ಪುರಕ್ಕೆ ತೆರಳುತ್ತಿದ್ದ ವೇಳೆ ಅವರ ಬೆಂಗಾವಲು ಕಾರುಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ. ಮಂಜು ಆವೃತವಾಗಿ, ರಸ್ತೆ ಅಸ್ಪಷ್ಟವಾಗಿದ್ದರಿಂದ ಈ ಘಟನೆ ನಡೆದಿದೆ.
ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ರಸ್ತೆ ಸ್ಪಷ್ಟವಾಗಿ ಕಾಣದ ಕಾರಣಕ್ಕೆ ಪ್ರಿಯಾಂಕಾ ಗಾಂಧಿ ಅವರ ಕಾರನ್ನು ಕೆಲಕಾಲ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ತಮ್ಮ ಕಾರಿನ ಗಾಜಿನ ಮೇಲಿದ್ದ ದೂಳನ್ನು ಸ್ವತಃ ಪ್ರಿಯಾಂಕಾ ಗಾಂಧಿ ಅವರೇ ಒರೆಸಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ತಾಣಗಗಳಲ್ಲಿ ವೈರಲ್ ಆಗಿದೆ.
ಮೃತ ರೈತನ ಕುಟಂಬಸ್ಥರ ಭೇಟಿ
ಜನವರಿ 26ರಂದು ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟಿದ್ದ ಉತ್ತರ ಪ್ರದೇಶದ ರಾಮ್ಪುರದ ರೈತನ ನಿವಾಸಕ್ಕೆ ಪ್ರಿಯಾಂಕಾ ಗುರುವಾರ ಭೇಟಿ ನೀಡಿದ್ದರು. ಕುಟುಂಬಸ್ಥರಿಗೆ ಅವರು ಸಾಂತ್ವನ ಹೇಳಿದರು.