ಬೆಂಗಳೂರು: ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣ ಮಂಗಳವಾರ (ಏ.27) ರಾತ್ರಿಯಿಂದಲೇ 14 ದಿನಗಳ ಕಾಲ ಅಂದರೆ ಮೇ 12ರವರೆಗೆ ರಾಜ್ಯಾದ್ಯಂತ ಲಾಕ್ಡೌನ್ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲಾಕ್ಡೌನ್ ಅಂಗವಾಗಿ ಅಂತರ್ ಜಿಲ್ಲೆ ಮತ್ತು ನೆರೆಯ ರಾಜ್ಯಗಳಿಗೆ ಹೋಗಲು ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ಗಳು ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಬಸ್ ಅಥವಾ ಇತರ ವಾಹನಗಳಲ್ಲಿ ತೆರಳಲು ಅವಕಾಶ. ಬೆಂಗಳೂರಿನಲ್ಲಿ ಮೆಟ್ರೊ ಮತ್ತು ಬಿಎಂಟಿಸಿ ಬಸ್ಗಳು ಇರುವುದಿಲ್ಲ. ಉಳಿದ ನಗರಗಳಲ್ಲೂ ಸ್ಥಳೀಯ ಸಾರಿಗೆ ಬಸ್ಸುಗಳು ಇರುವುದಿಲ್ಲ ಎಂದಿರುವ ಬೆನ್ನಲ್ಲೇ ಕಾರ್ಮಿಕರ ವಲಸೆ ಮತ್ತೆ ಶುರುವಾಗಿದೆ ಮುಖ್ಯಮಂತ್ರಿಗಳ ಆದೇಶ ಹೊರ ಬೀಳುತ್ತಿದ್ದಂತೆ ಆತಂಕಕ್ಕೊಳಗಾದ ಸಾವಿರಾರು ಜನರು ಗಂಟು-ಮೂಟೆ ಕಟ್ಟಿಕೊಂಡು ತಮ್ಮ ಊರುಗಳಿಗೆ ತೆರಳಲು ಬಸ್ ಮತ್ತು ರೈಲ್ವೆ ನಿಲ್ದಾಣಗಳತ್ತ ದೌಡಾಯಿಸಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಗಂಟು ಮೂಟೆ ಹೊತ್ತು ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮನೆ ಸೇರುವ ಧಾವಂತದಲ್ಲಿರುವ ಕಾರ್ಮಿಕರು ಮತ್ತು ಇತರೆ ಜನರು ಧಾವಂತದಲ್ಲಿ ಬಸ್ ಹತ್ತುತ್ತಿದ್ದದ್ದು ಕಂಡುಬಂತು. ತುಮಕೂರು ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಸಂಚಾರ ನಡೆಸುತ್ತಿದ್ದು, ಟೋಲ್ನಲ್ಲಿ ಸಾಲುಗಟ್ಟಿ ನಿಂತಿದ್ದವು.