ಉಸಿರಾಟದ ಸಮಸ್ಯೆಯಿಂದ ಶನಿವಾರ ಕಲಬುರ್ಗಿಯಲ್ಲಿ ನಿಧನರಾದ ಪ್ರಸಿದ್ಧ ಸಂಗೀತ ನಿರ್ದೇಶಕ ಇಸ್ಮಾಯಿಲ್ ಗೋನಾಳ್ (75) ಅವರ ಪಾರ್ಥಿವ ಶರೀರವನ್ನು ಬಳ್ಳಾರಿಗೆ ತರಲಾಗಿದೆ.
ಪಾರ್ಥಿವ ಶರೀರದ ಮುಂದೆ ಕಲಾವಿದರು ರಂಗಗೀತೆಗಳನ್ನು ಹಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ರಂಗಕರ್ಮಿ ಸಿ. ಬಸವಲಿಂಗಯ್ಯ, ಲೇಖಕ ಡಾ. ರಾಜಪ್ಪ ದಳವಾಯಿ, ಡಿ.ಆರ್. ರಾಜಪ್ಪ, ರಂಗತೋರಣ ಸಂಸ್ಥೆಯ ಕಪ್ಪಗಲ್ಲು ಪ್ರಭುದೇವ, ಅಡವೀಸ್ವಾಮಿ, ಹೆಚ್.ಎಮ್. ರಾಮಚಂದ್ರ, ಸಿ. ಚೆನ್ನಬಸವಣ್ಣ ಇದ್ದರು.
ಕಲಬುರ್ಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯುತ್ತಿರುವ ಕಲಬುರ್ಗಿ ರಂಗೋತ್ಸವದಲ್ಲಿ ಭಾಗವಹಿಸಲು ಗೋನಾಳ್ ಅವರು ಶುಕ್ರವಾರ ಬಂದಿದ್ದರು. ಗುಲಬರ್ಗಾ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿದ್ದರು.
ಶನಿವಾರ ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆಯೇ ಮೃತಪಟ್ಟರು. ಗೋನಾಳ್ ಅವರು 45ಕ್ಕೂ ಹೆಚ್ಚು ನಾಟಕ, ಸಿನಿಮಾ, ಧಾರಾವಾಹಿಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.