ಸದಾ ನಗುಮುಖದ ಸದಾನಂದಗೌಡರು ರಾಜಕೀಯ ಆಟದಲ್ಲಿ ಒಂದರ ಹಿಂದೆ ಒಂದು ಎಂಬಂತೆ ಹಾವಿನ ಏಟು, ಏಣಿಯ ಖುಷಿಯನ್ನು ಅನುಭವಿಸಿದವರು. ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಿರಾಸೆ ಅನುಭವಿಸಿದ್ದ ಅವರಿಗೆ ನಂತರದ ದಿನಗಳಲ್ಲಿ ಮುಖ್ಯಮಂತ್ರಿ ಗಾದಿಯೇ ಒಲಿದು ಬಂದಿದ್ದು ಈಗ ಇತಿಹಾಸ. ದೆಹಲಿ ರಾಜಕಾರಣದತ್ತ ಚಿತ್ತ ನೆಟ್ಟ ಗೌಡರು ಕೇಂದ್ರ ಸಂಪುಟದಲ್ಲಿಯೂ ಸ್ಥಾನ ಪಡೆದು ಗಟ್ಟಿಯಾದರು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮತ್ತೊಮ್ಮೆ ಮತಭಿಕ್ಷೆ ಬೇಡುತ್ತಿರುವ ಅವರು, ‘ಪ್ರಜಾವಾಣಿ’ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ.