ನೀರಿನ ಸಂಪರ್ಕದ ಹೆಸರಿನಲ್ಲಿ ₹ 3.77 ಲಕ್ಷ ವಂಚನೆ
ಬೆಂಗಳೂರು: ‘ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಹೇಳಿದ್ದ ಜಲಮಂಡಳಿಯ ಮೀಟರ್ ರೀಡರ್ ಹಾಗೂ ಗುತ್ತಿಗೆದಾರ, ನನ್ನಿಂದ ₹ 3.77 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಇ.ಎನ್. ಲಕ್ಷ್ಮಿನರಸಿಂಹಯ್ಯ ಎಂಬುವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ.
‘ಕಾಮಾಕ್ಷಿಪಾಳ್ಯ ಪೇಟೆ ಚನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿ ‘ಆದಿತ್ಯಾ ಕಾಂಪೋನೆಂಟ್ಸ್’ ಕಾರ್ಖಾನೆ ನಡೆಸುತ್ತಿರುವ ಲಕ್ಷ್ಮಿನರಸಿಂಹಯ್ಯ, ಮೇ 5ರಂದು ದೂರು ನೀಡಿದ್ದಾರೆ. ಮೀಟರ್ ರೀಡರ್ ನಾರಾಯಣ ಹಾಗೂ ಗುತ್ತಿಗೆದಾರ ಪ್ರಕಾಶ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಲಕ್ಷ್ಮಿನರಸಿಂಹಯ್ಯ ಅವರ ಕಾರ್ಖಾನೆಯಲ್ಲಿ ಎರಡು ಘಟಕಗಳಿವೆ. ಮೊದಲ ಘಟಕದಲ್ಲಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಇದೆ. ಎರಡನೇ ಘಟಕದಲ್ಲಿ ಸ್ವಂತ ಬೋರ್ವೆಲ್ ಇದ್ದು, ಅಲ್ಲಿಯೇ ಜಲಮಂಡಳಿಯಿಂದ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ನಾರಾಯಣ ಹೇಳಿದ್ದರು. ಆ ಕೆಲಸ ಮಾಡಿಕೊಡಲು ಗುತ್ತಿಗೆದಾರ ಪ್ರಕಾಶ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು.’
‘ಜಲಮಂಡಳಿಯದ್ದು ಎನ್ನಲಾದ ಪತ್ರವೊಂದನ್ನು ತೋರಿಸಿದ್ದ ಆರೋಪಿಗಳು, ₹ 3.77 ಲಕ್ಷ ಶುಲ್ಕ ಪಾವತಿ ಮಾಡುವಂತೆ ಹೇಳಿದ್ದರು. ಅದನ್ನು ನಂಬಿದ್ದ ಲಕ್ಷ್ಮಿನರಸಿಂಹಯ್ಯ, ಡಿ.ಡಿ ತೆಗೆಸಿ ಕೊಟ್ಟಿದ್ದರು. ಅಷ್ಟಾದರೂ ಆರೋಪಿಗಳು, ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ’ ಎಂದು ಪೊಲೀಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.