<div> ದೀಪಾವಳಿ ಎಂದರೆ ದೀಪಗಳ ಸಾಲು. ದೀಪ ಎಂದರೆ ಬೆಳಕು. ಬೆಳಕು ಇಲ್ಲದಿದ್ದರೆ ನಾವು ಜಗತ್ತಿನಲ್ಲಿ ಏನನ್ನೂ ಕಾಣಲಾರೆವು. ಜಗತ್ತು ನಮಗೆ ಕಾಣಬೇಕಾದರೆ ಬೆಳಕು ಬೇಕು.<div> </div><div> ಬೆಳಕಿನ ಹಬ್ಬವೇ ‘ದೀಪಾವಳಿ’. ಜೀವನದುದ್ದಕ್ಕೂ ಬೆಳಕು ನಮ್ಮ ಜೊತೆಯಲ್ಲಿರಲಿ ಎನ್ನುವುದರ ಸಾಂಕೇತಿಕತೆಯೇ ದೀಪಾವಳಿ. ಬೆಳಕು ಎಂದರೆ ಜ್ಞಾನ, ಅರಿವು, ತಿಳಿವಳಿಕೆ.</div><div> </div><div> ಯಾವುದರಿಂದ ನಾವು ಜೀವನವನ್ನು ನೋಡಬಲ್ಲೆವೋ, ನಮ್ಮನ್ನು ನಾವು ಕಾಣಬಲ್ಲೆವೋ, ನಮ್ಮ ಹಿತಾಹಿತಗಳನ್ನು ಕಂಡುಕೊಳ್ಳಬಲ್ಲೆವೋ – ಅವೆಲ್ಲವೂ ಜ್ಞಾನವೇ ಹೌದು; ಅವೆಲ್ಲವೂ ಬದುಕಿನ ಹಾದಿಯಲ್ಲಿ ಒದಗಿದ ಬೆಳಕೇ ಹೌದು. ಬೆಳಕನ್ನು ದೇವರಿಗೂ ಸಮೀಕರಿಸಲಾಗಿದೆ; ‘ಪರಂಜ್ಯೋತಿ’ ಎಂದು ಆರಾಧಿಸಲಾಗಿದೆ.</div><div> </div><div> ಹೀಗೆ ನಮ್ಮ ಜೀವನಕ್ಕೂ ಬೆಳಕಿಗೂ ದೀಪಾವಳಿಗೂ ನೇರ ನಂಟಿದೆ. </div><div> </div><div> ದೀಪಾವಳಿ ಹಬ್ಬವು ಒಂದು ದಿನದ ಹಬ್ಬವಲ್ಲ; ನಾಲ್ಕೈದು ದಿನಗಳ ಕಾಲ ಹಬ್ಬಿಕೊಂಡಿರುವ ಪರ್ವವಿದು. ಈ ದಿನಗಳಲ್ಲಿ ನಡೆಸುವ ವಿವಿಧ ಕಲಾಪಗಳಿಗೆ ಅನುಗುಣವಾಗಿ ದೀಪಾವಳಿಯನ್ನು ಹಲವು ಹೆಸರುಗಳಿಂದ ಕರೆಯುವುದುಂಟು: ಸುಖರಾತ್ರಿ, ಸುಖಸುಪ್ತಿಕಾ, ಯಕ್ಷರಾತ್ರಿ, ಕೌಮುದೀಮಹೋತ್ಸವ, ನರಕಚತುರ್ದಶೀ, ಬಲಿಪಾಡ್ಯಮೀ, ವೀರಪ್ರತಿಪದಾ, ಭಗಿನೀದ್ವತೀಯಾ, ಸೋದರಬಿದಿಗೆ – ಹೀಗೆ ಹಲವು ಹೆಸರುಗಳು ದೀಪಾವಳಿಗೆ.</div><div> </div><div> ದೀಪವಾಳಿಯನ್ನು ಬೇರೆ ಬೇರೆ ಪ್ರಾಂತಗಳಲ್ಲಿ ಆಚರಿಸುವ ವಿಧಾನದಲ್ಲಿ ವ್ಯತ್ಯಾಸಗಳಿದ್ದರೂ ದೀಪೋತ್ಸವ, ದೀಪದ ಆರಾಧನೆ ಮಾತ್ರ ಎಲ್ಲೆಡೆ ಕಂಡುಬರುವ ಸಮಾನ ಆಚರಣೆಯಾಗಿದೆ.</div><div> </div><div> ಮನೆ, ಮಠ, ನದೀತೀರಗಳು, ಊರಿನ ರಸ್ತೆಗಳಲ್ಲಿ ದೀಪಗಳನ್ನು ಬೆಳಗುವುದು ಬಹಳ ಹಿಂದಿನ ಕಾಲದಿಂದಲೂ ನಡೆದುಬಂದ ಆಚರಣೆಯಾಗಿದೆ.</div><div> </div><div> ದೀಪಾವಳಿಯ ಆರಂಭವಾಗುವುದು ನೀರು ತುಂಬುವ ಹಬ್ಬದೊಂದಿಗೆ; ಇದು ನರಕಚತುರ್ದಶಿಯ ಹಿಂದಿನ ದಿನ. ಸ್ನಾನದ ಪಾತ್ರೆಗಳನ್ನೂ ನೀರನ್ನು ಕಾಯಿಸುವ ಹಂಡೆಯನ್ನೂ ಶುದ್ಧವಾಗಿ ತೊಳೆದು, ಬಳಿಕ ಹಂಡೆಗೆ ನೀರನ್ನು ತುಂಬಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು. </div><div> </div><div> ಅಂದು ಮನೆಯ ಹೊರಗೆ ದೀಪವನ್ನು ಬೆಳಗಿಸಲಾಗುತ್ತದೆ. ಹೀಗೆ ಮಾಡುವುದರಿಂದ ಅಪಮೃತ್ಯವಿನಿಂದ ಪಾರಾಗುತ್ತೇವೆ ಎನ್ನುವುದು ನಂಬಿಕೆ. ಮರುದಿನ, ಅಂದರೆ ನರಕಚತುರ್ದಶಿಯಂದು ಬ್ರಾಹ್ಮಮುಹೂರ್ತದಲ್ಲಿಯೇ ಎದ್ದು ಅಭ್ಯಂಗಸ್ನಾನವನ್ನು ಮಾಡಬೇಕು.</div><div> </div><div> ಈ ದಿನ ಬೆಳಗ್ಗೆ ಎಣ್ಣೆಯಲ್ಲಿ ಲಕ್ಷ್ಮಿಯೂ ನೀರಿನಲ್ಲಿ ಗಂಗೆಯೂ ನೆಲಸಿರುತ್ತಾರೆ; ಅವುಗಳನ್ನು ಬಳಸಿ ಸ್ನಾನ ಮಾಡುವವರು ಯಮಲೋಕದಿಂದ ಪಾರಾಗುತ್ತಾರೆ ಎಂದು ಪುರಾಣದ ಮಾತಿದೆ:</div><div> </div><div> <em><strong>ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಶ್ಚತುರ್ದಶೀಂ l </strong></em></div><div> <em><strong>ಪ್ರಾತಃಕಾಲೇ ತು ಯಃ ಕುರ್ಯಾತ್ ಯಮಲೋಕಂ ನ ಪಶ್ಯತಿ ll</strong></em></div><div> </div><div> ಮರುದಿನ ಅಮಾವಾಸ್ಯೆ; ಅಂದು ಬೆಳಗ್ಗೆ ಎಣ್ಣೆಸ್ನಾನವನ್ನು ಮಾಡಿ ಲಕ್ಷ್ಮೀಪೂಜೆಯನ್ನು ಮಾಡಲಾಗುತ್ತದೆ. ಲಕ್ಷ್ಮಿ ಎಂದರೆ ನಮ್ಮ ಅಂತರಂಗದ ಮತ್ತು ಬಹಿರಂಗದ ಸಿರಿವಂತಿಕೆಗೆ ಸಂಕೇತ.</div><div> </div><div> ಲಕ್ಷ್ಮೀ ಸದಾ ನಮ್ಮ ಜೊತೆಯಲ್ಲಿದ್ದು ಬದುಕು ಶ್ರೀಮಂತವಾಗಿರಲಿ ಎಂಬ ಆಶಯದೊಂದಿಗೆ ಲಕ್ಷ್ಮೀಪೂಜೆಯನ್ನು ನೆರವೇರಿಸಬೇಕು. ವ್ಯಾಪಾರಿಗಳು ಅಂಗಡಿಗಳಲ್ಲಿ ಲಕ್ಷ್ಮೀಪೂಜೆ ಮಾಡುತ್ತಾರೆ.</div><div> </div><div> ಅಮಾವಾಸ್ಯೆಯ ಮರುದಿನವೇ ಬಲಿಪಾಡ್ಯಮಿ. ಅಂದು ಕೂಡ ಅಭ್ಯಂಗಸ್ನಾನವನ್ನು ಮಾಡಿ ಬಲೀಂದ್ರನನ್ನು ಪೂಜಿಸಲಾಗುತ್ತದೆ. ಬಲೀಂದ್ರನನ್ನು ಪ್ರತಿಷ್ಠಾಪಿಸಿ, ಅವನ ಪರಿವಾರದೊಂದಿಗೆ ಪೂಜಿಸಲಾಗುವುದು.</div><div> </div><div> ಸೆಗಣಿಯಲ್ಲಿ ಕೋಟೆಯನ್ನು ನಿರ್ಮಿಸಿ, ಆ ಮೂಲಕ ಒಟ್ಟು ಬಲೀಂದ್ರನ ಸಾಮ್ರಾಜ್ಯವನ್ನೇ ಮತ್ತೆ ಸ್ಥಾಪಿಸಿ, ಅವನನ್ನು ಅರ್ಚಿಸುವ ಸಂಪ್ರದಾಯ ದೇಶದ ಕೆಲವು ಪ್ರಾಂತ್ಯಗಳಲ್ಲಿದೆ. ರಾತ್ರಿ ಹೂಗಳನ್ನು ಎರಚುತ್ತ ಬಲೀಂದ್ರನಿಗೆ ಜೈಕಾರ ಹಾಕಲಾಗುತ್ತದೆ.</div><div> </div><div> ದೀಪಾವಳಿಯ ಎಲ್ಲ ದಿನಗಳ ಆಚರಣೆಯ ಹಿನ್ನೆಲೆಯಲ್ಲೂ ಪೌರಾಣಿಕ ಪ್ರಸಂಗಗಳ ತಾತ್ವಿಕತೆಯಿದೆ. ‘ನರಕಚತುರ್ದಶಿ’ಯಲ್ಲಿ ನರಕ ಎನ್ನುವುದು ನಮ್ಮ ಬದುಕಿನ ಎಲ್ಲ ಕಷ್ಟಗಳ ಸಾಂಕೇತಿಕತೆಯನ್ನು ನೋಡಬಹುದು.</div><div> </div><div> ಅಷ್ಟೇ ಅಲ್ಲದೆ, ಅದು ನರಕ ಎನ್ನುವ ರಾಕ್ಷಸನ್ನು ಶ್ರೀಕೃಷ್ಣನು ಸಂಹರಿಸಿದ ದಿನದ ಸಂಭ್ರಮಾಚರಣೆಯೂ ಹೌದು. ಸೆರೆಯಲ್ಲಿದ್ದ ಸಾವಿರಾರು ಸ್ತ್ರೀಯರನ್ನು ಶ್ರೀಕೃಷ್ಣ ಕಾಪಾಡಿ, ಜೀವನವನ್ನು ಕೊಟ್ಟ ದಿನವೇ ನರಕಚತುರ್ದಶೀ. ಅಂದು –</div><div> </div><div> <em><strong>ನಮೋ ನರಕಸಂತ್ರಾಸರಕ್ಷಾಮಂಗಳಕಾರಿಣೇ l</strong></em></div><div> <em><strong>ವಾಸುದೇವಾಯ ಶಾಂತಾಯ ಕೃಷ್ಣಾಯ ಪರಮಾತ್ಮನೇ ll </strong></em>– ಎಂದು ಶ್ರೀಕೃಷ್ಣನನ್ನು ಸ್ತುತಿಸಲಾಗುತ್ತದೆ.</div><div> </div><div> ಇನ್ನು ‘ಅಮಾವಾಸ್ಯೆ’. ಕತ್ತಲೆಗೆ ಸಂಕೇತವೇ ಅಮಾವಾಸ್ಯೆ. ನಮಗೆ ಏನನ್ನೂ ನೋಡಲಾಗದ ಸ್ಥಿತಿಯೇ ‘ಕತ್ತಲು’. ನಮ್ಮ ಜೀವನವನ್ನೇ ನಾವು ನೋಡಲಾಗದ ಸ್ಥಿತಿಯನ್ನು ಒಡ್ಡುವುದು ಯಾವುದೆಂದರೆ ಅದು ಬಡತನವೇ ಹೌದು.</div><div> </div><div> ಆದರೆ ಬಡತನ ಎಂದರೆ ಕೇವಲ ಆಸ್ತಿ–ಅಂತಸ್ತು, ಹಣ–ಒಡವೆಗಳು ಇಲ್ಲದಿರುವುದಷ್ಟೆ ಅಲ್ಲ; ವಿದ್ಯೆ, ಬುದ್ಧಿ, ಶಾಂತಿ, ಸಮಾಧಾನ, ತೃಪ್ತಿಗಳು ಇಲ್ಲದಿರುವುದೂ ಬಡತನವೇ ಸರಿ.</div><div> </div><div> ಈ ಎಲ್ಲ ಬಡತನಗಳಿಂದಲೂ ನಮ್ಮ ಮುಕ್ತಗೊಳಿಸಬಲ್ಲ ಶಕ್ತಿಯೇ ‘ಶ್ರೀಲಕ್ಷ್ಮೀ.’ ಹೀಗೆ ಕತ್ತಲಿನಲ್ಲಿ ಬೆಳಕನ್ನು ಕಾಣಬೇಕೆಂಬ ಮನೋಧರ್ಮವೇ ಜೀವನವನ್ನು ಕಟ್ಟಿಕೊಳ್ಳುವುದರ ಮೊದಲ ಹಂತ.</div><div> </div><div> ನಿರಂತರವಾಗಿ ನಮ್ಮ ಬದುಕನ್ನು ನೆಮ್ಮದಿ, ತೃಪ್ತಿ, ವಿವೇಕದ ಕಡೆಗೆ ನಡೆಸುವ ಸಂಕಲ್ಪಶಕ್ತಿಯನ್ನು ಕ್ರಿಯಾಶೀಲಗೊಳಿಸುವುದೇ ಅಮಾವಾಸ್ಯೆಯಂದು ಲಕ್ಷ್ಮೀಪೂಜೆಯನ್ನು ಮಾಡುವುದರ ತಾತ್ಪರ್ಯ. </div><div> </div><div> ‘ಬಲಿಪಾಡ್ಯಮಿ’ಯಂದು ಬಲಿ ಚಕ್ರವರ್ತಿಯನ್ನು ಪೂಜಿಸಲಾಗುತ್ತದೆ. ಏಳು ಚಿರಂಜೀವಿಗಳಲ್ಲಿ ಒಬ್ಬನಾಗಿ ಬಲೀಂದ್ರನನ್ನು ಎಣಿಸಲಾಗಿದೆ:</div><div> </div><div> <em><strong>ಅಶ್ವತ್ಥಾಮಾ ಬಲಿರ್ವ್ಯಾಸಃ ಹನುಮಾಂಶ್ಚ ವಿಭೀಷಣಃ l</strong></em></div><div> <em><strong>ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ ll</strong></em></div><div> </div><div> ವಿಷ್ಣು ವಾಮನಾವತಾರದಲ್ಲಿ ಬಲಿಯನ್ನು ಪಾತಾಳಕ್ಕೆ ಅಟ್ಟಿದ ಕಥೆ ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ಈ ಕಥೆಗೆ ಹಲವು ನೆಲೆಗಳ ಅರ್ಥಗಳಿವೆ. ನಮ್ಮ ಅಹಂಕಾರವನ್ನು ಮೆಟ್ಟಿ, ಜೀವನವನ್ನು ರೂಪಿಸಿಕೊಳ್ಳುವ ಆಶಯವೂ ಈ ಕಥೆಯಲ್ಲಿದೆ.</div><div> </div><div> ಬದುಕು ಸರ್ವಕಾಲಕ್ಕೂ ಸಲ್ಲುವ ನೆಮ್ಮದಿಯ ನೆಲೆಯಾಗಲು, ಸೌಂದರ್ಯದ ಖನಿಯಾಗಲು ಅಹಂಕಾರತ್ಯಾಗ ಮುಖ್ಯ ಎಂಬ ಸಂದೇಶವನ್ನೂ ಈ ಕಥೆಯಲ್ಲಿ ಕಾಣಬಹುದಾಗಿದೆ.</div><div> </div><div> ಹೀಗೆ ದೀಪಾವಳಿ ಎನ್ನುವುದು ನಮ್ಮ ಬದುಕನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ದೀಪಗಳ ಹಬ್ಬವಾಗಿದೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> ದೀಪಾವಳಿ ಎಂದರೆ ದೀಪಗಳ ಸಾಲು. ದೀಪ ಎಂದರೆ ಬೆಳಕು. ಬೆಳಕು ಇಲ್ಲದಿದ್ದರೆ ನಾವು ಜಗತ್ತಿನಲ್ಲಿ ಏನನ್ನೂ ಕಾಣಲಾರೆವು. ಜಗತ್ತು ನಮಗೆ ಕಾಣಬೇಕಾದರೆ ಬೆಳಕು ಬೇಕು.<div> </div><div> ಬೆಳಕಿನ ಹಬ್ಬವೇ ‘ದೀಪಾವಳಿ’. ಜೀವನದುದ್ದಕ್ಕೂ ಬೆಳಕು ನಮ್ಮ ಜೊತೆಯಲ್ಲಿರಲಿ ಎನ್ನುವುದರ ಸಾಂಕೇತಿಕತೆಯೇ ದೀಪಾವಳಿ. ಬೆಳಕು ಎಂದರೆ ಜ್ಞಾನ, ಅರಿವು, ತಿಳಿವಳಿಕೆ.</div><div> </div><div> ಯಾವುದರಿಂದ ನಾವು ಜೀವನವನ್ನು ನೋಡಬಲ್ಲೆವೋ, ನಮ್ಮನ್ನು ನಾವು ಕಾಣಬಲ್ಲೆವೋ, ನಮ್ಮ ಹಿತಾಹಿತಗಳನ್ನು ಕಂಡುಕೊಳ್ಳಬಲ್ಲೆವೋ – ಅವೆಲ್ಲವೂ ಜ್ಞಾನವೇ ಹೌದು; ಅವೆಲ್ಲವೂ ಬದುಕಿನ ಹಾದಿಯಲ್ಲಿ ಒದಗಿದ ಬೆಳಕೇ ಹೌದು. ಬೆಳಕನ್ನು ದೇವರಿಗೂ ಸಮೀಕರಿಸಲಾಗಿದೆ; ‘ಪರಂಜ್ಯೋತಿ’ ಎಂದು ಆರಾಧಿಸಲಾಗಿದೆ.</div><div> </div><div> ಹೀಗೆ ನಮ್ಮ ಜೀವನಕ್ಕೂ ಬೆಳಕಿಗೂ ದೀಪಾವಳಿಗೂ ನೇರ ನಂಟಿದೆ. </div><div> </div><div> ದೀಪಾವಳಿ ಹಬ್ಬವು ಒಂದು ದಿನದ ಹಬ್ಬವಲ್ಲ; ನಾಲ್ಕೈದು ದಿನಗಳ ಕಾಲ ಹಬ್ಬಿಕೊಂಡಿರುವ ಪರ್ವವಿದು. ಈ ದಿನಗಳಲ್ಲಿ ನಡೆಸುವ ವಿವಿಧ ಕಲಾಪಗಳಿಗೆ ಅನುಗುಣವಾಗಿ ದೀಪಾವಳಿಯನ್ನು ಹಲವು ಹೆಸರುಗಳಿಂದ ಕರೆಯುವುದುಂಟು: ಸುಖರಾತ್ರಿ, ಸುಖಸುಪ್ತಿಕಾ, ಯಕ್ಷರಾತ್ರಿ, ಕೌಮುದೀಮಹೋತ್ಸವ, ನರಕಚತುರ್ದಶೀ, ಬಲಿಪಾಡ್ಯಮೀ, ವೀರಪ್ರತಿಪದಾ, ಭಗಿನೀದ್ವತೀಯಾ, ಸೋದರಬಿದಿಗೆ – ಹೀಗೆ ಹಲವು ಹೆಸರುಗಳು ದೀಪಾವಳಿಗೆ.</div><div> </div><div> ದೀಪವಾಳಿಯನ್ನು ಬೇರೆ ಬೇರೆ ಪ್ರಾಂತಗಳಲ್ಲಿ ಆಚರಿಸುವ ವಿಧಾನದಲ್ಲಿ ವ್ಯತ್ಯಾಸಗಳಿದ್ದರೂ ದೀಪೋತ್ಸವ, ದೀಪದ ಆರಾಧನೆ ಮಾತ್ರ ಎಲ್ಲೆಡೆ ಕಂಡುಬರುವ ಸಮಾನ ಆಚರಣೆಯಾಗಿದೆ.</div><div> </div><div> ಮನೆ, ಮಠ, ನದೀತೀರಗಳು, ಊರಿನ ರಸ್ತೆಗಳಲ್ಲಿ ದೀಪಗಳನ್ನು ಬೆಳಗುವುದು ಬಹಳ ಹಿಂದಿನ ಕಾಲದಿಂದಲೂ ನಡೆದುಬಂದ ಆಚರಣೆಯಾಗಿದೆ.</div><div> </div><div> ದೀಪಾವಳಿಯ ಆರಂಭವಾಗುವುದು ನೀರು ತುಂಬುವ ಹಬ್ಬದೊಂದಿಗೆ; ಇದು ನರಕಚತುರ್ದಶಿಯ ಹಿಂದಿನ ದಿನ. ಸ್ನಾನದ ಪಾತ್ರೆಗಳನ್ನೂ ನೀರನ್ನು ಕಾಯಿಸುವ ಹಂಡೆಯನ್ನೂ ಶುದ್ಧವಾಗಿ ತೊಳೆದು, ಬಳಿಕ ಹಂಡೆಗೆ ನೀರನ್ನು ತುಂಬಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು. </div><div> </div><div> ಅಂದು ಮನೆಯ ಹೊರಗೆ ದೀಪವನ್ನು ಬೆಳಗಿಸಲಾಗುತ್ತದೆ. ಹೀಗೆ ಮಾಡುವುದರಿಂದ ಅಪಮೃತ್ಯವಿನಿಂದ ಪಾರಾಗುತ್ತೇವೆ ಎನ್ನುವುದು ನಂಬಿಕೆ. ಮರುದಿನ, ಅಂದರೆ ನರಕಚತುರ್ದಶಿಯಂದು ಬ್ರಾಹ್ಮಮುಹೂರ್ತದಲ್ಲಿಯೇ ಎದ್ದು ಅಭ್ಯಂಗಸ್ನಾನವನ್ನು ಮಾಡಬೇಕು.</div><div> </div><div> ಈ ದಿನ ಬೆಳಗ್ಗೆ ಎಣ್ಣೆಯಲ್ಲಿ ಲಕ್ಷ್ಮಿಯೂ ನೀರಿನಲ್ಲಿ ಗಂಗೆಯೂ ನೆಲಸಿರುತ್ತಾರೆ; ಅವುಗಳನ್ನು ಬಳಸಿ ಸ್ನಾನ ಮಾಡುವವರು ಯಮಲೋಕದಿಂದ ಪಾರಾಗುತ್ತಾರೆ ಎಂದು ಪುರಾಣದ ಮಾತಿದೆ:</div><div> </div><div> <em><strong>ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಶ್ಚತುರ್ದಶೀಂ l </strong></em></div><div> <em><strong>ಪ್ರಾತಃಕಾಲೇ ತು ಯಃ ಕುರ್ಯಾತ್ ಯಮಲೋಕಂ ನ ಪಶ್ಯತಿ ll</strong></em></div><div> </div><div> ಮರುದಿನ ಅಮಾವಾಸ್ಯೆ; ಅಂದು ಬೆಳಗ್ಗೆ ಎಣ್ಣೆಸ್ನಾನವನ್ನು ಮಾಡಿ ಲಕ್ಷ್ಮೀಪೂಜೆಯನ್ನು ಮಾಡಲಾಗುತ್ತದೆ. ಲಕ್ಷ್ಮಿ ಎಂದರೆ ನಮ್ಮ ಅಂತರಂಗದ ಮತ್ತು ಬಹಿರಂಗದ ಸಿರಿವಂತಿಕೆಗೆ ಸಂಕೇತ.</div><div> </div><div> ಲಕ್ಷ್ಮೀ ಸದಾ ನಮ್ಮ ಜೊತೆಯಲ್ಲಿದ್ದು ಬದುಕು ಶ್ರೀಮಂತವಾಗಿರಲಿ ಎಂಬ ಆಶಯದೊಂದಿಗೆ ಲಕ್ಷ್ಮೀಪೂಜೆಯನ್ನು ನೆರವೇರಿಸಬೇಕು. ವ್ಯಾಪಾರಿಗಳು ಅಂಗಡಿಗಳಲ್ಲಿ ಲಕ್ಷ್ಮೀಪೂಜೆ ಮಾಡುತ್ತಾರೆ.</div><div> </div><div> ಅಮಾವಾಸ್ಯೆಯ ಮರುದಿನವೇ ಬಲಿಪಾಡ್ಯಮಿ. ಅಂದು ಕೂಡ ಅಭ್ಯಂಗಸ್ನಾನವನ್ನು ಮಾಡಿ ಬಲೀಂದ್ರನನ್ನು ಪೂಜಿಸಲಾಗುತ್ತದೆ. ಬಲೀಂದ್ರನನ್ನು ಪ್ರತಿಷ್ಠಾಪಿಸಿ, ಅವನ ಪರಿವಾರದೊಂದಿಗೆ ಪೂಜಿಸಲಾಗುವುದು.</div><div> </div><div> ಸೆಗಣಿಯಲ್ಲಿ ಕೋಟೆಯನ್ನು ನಿರ್ಮಿಸಿ, ಆ ಮೂಲಕ ಒಟ್ಟು ಬಲೀಂದ್ರನ ಸಾಮ್ರಾಜ್ಯವನ್ನೇ ಮತ್ತೆ ಸ್ಥಾಪಿಸಿ, ಅವನನ್ನು ಅರ್ಚಿಸುವ ಸಂಪ್ರದಾಯ ದೇಶದ ಕೆಲವು ಪ್ರಾಂತ್ಯಗಳಲ್ಲಿದೆ. ರಾತ್ರಿ ಹೂಗಳನ್ನು ಎರಚುತ್ತ ಬಲೀಂದ್ರನಿಗೆ ಜೈಕಾರ ಹಾಕಲಾಗುತ್ತದೆ.</div><div> </div><div> ದೀಪಾವಳಿಯ ಎಲ್ಲ ದಿನಗಳ ಆಚರಣೆಯ ಹಿನ್ನೆಲೆಯಲ್ಲೂ ಪೌರಾಣಿಕ ಪ್ರಸಂಗಗಳ ತಾತ್ವಿಕತೆಯಿದೆ. ‘ನರಕಚತುರ್ದಶಿ’ಯಲ್ಲಿ ನರಕ ಎನ್ನುವುದು ನಮ್ಮ ಬದುಕಿನ ಎಲ್ಲ ಕಷ್ಟಗಳ ಸಾಂಕೇತಿಕತೆಯನ್ನು ನೋಡಬಹುದು.</div><div> </div><div> ಅಷ್ಟೇ ಅಲ್ಲದೆ, ಅದು ನರಕ ಎನ್ನುವ ರಾಕ್ಷಸನ್ನು ಶ್ರೀಕೃಷ್ಣನು ಸಂಹರಿಸಿದ ದಿನದ ಸಂಭ್ರಮಾಚರಣೆಯೂ ಹೌದು. ಸೆರೆಯಲ್ಲಿದ್ದ ಸಾವಿರಾರು ಸ್ತ್ರೀಯರನ್ನು ಶ್ರೀಕೃಷ್ಣ ಕಾಪಾಡಿ, ಜೀವನವನ್ನು ಕೊಟ್ಟ ದಿನವೇ ನರಕಚತುರ್ದಶೀ. ಅಂದು –</div><div> </div><div> <em><strong>ನಮೋ ನರಕಸಂತ್ರಾಸರಕ್ಷಾಮಂಗಳಕಾರಿಣೇ l</strong></em></div><div> <em><strong>ವಾಸುದೇವಾಯ ಶಾಂತಾಯ ಕೃಷ್ಣಾಯ ಪರಮಾತ್ಮನೇ ll </strong></em>– ಎಂದು ಶ್ರೀಕೃಷ್ಣನನ್ನು ಸ್ತುತಿಸಲಾಗುತ್ತದೆ.</div><div> </div><div> ಇನ್ನು ‘ಅಮಾವಾಸ್ಯೆ’. ಕತ್ತಲೆಗೆ ಸಂಕೇತವೇ ಅಮಾವಾಸ್ಯೆ. ನಮಗೆ ಏನನ್ನೂ ನೋಡಲಾಗದ ಸ್ಥಿತಿಯೇ ‘ಕತ್ತಲು’. ನಮ್ಮ ಜೀವನವನ್ನೇ ನಾವು ನೋಡಲಾಗದ ಸ್ಥಿತಿಯನ್ನು ಒಡ್ಡುವುದು ಯಾವುದೆಂದರೆ ಅದು ಬಡತನವೇ ಹೌದು.</div><div> </div><div> ಆದರೆ ಬಡತನ ಎಂದರೆ ಕೇವಲ ಆಸ್ತಿ–ಅಂತಸ್ತು, ಹಣ–ಒಡವೆಗಳು ಇಲ್ಲದಿರುವುದಷ್ಟೆ ಅಲ್ಲ; ವಿದ್ಯೆ, ಬುದ್ಧಿ, ಶಾಂತಿ, ಸಮಾಧಾನ, ತೃಪ್ತಿಗಳು ಇಲ್ಲದಿರುವುದೂ ಬಡತನವೇ ಸರಿ.</div><div> </div><div> ಈ ಎಲ್ಲ ಬಡತನಗಳಿಂದಲೂ ನಮ್ಮ ಮುಕ್ತಗೊಳಿಸಬಲ್ಲ ಶಕ್ತಿಯೇ ‘ಶ್ರೀಲಕ್ಷ್ಮೀ.’ ಹೀಗೆ ಕತ್ತಲಿನಲ್ಲಿ ಬೆಳಕನ್ನು ಕಾಣಬೇಕೆಂಬ ಮನೋಧರ್ಮವೇ ಜೀವನವನ್ನು ಕಟ್ಟಿಕೊಳ್ಳುವುದರ ಮೊದಲ ಹಂತ.</div><div> </div><div> ನಿರಂತರವಾಗಿ ನಮ್ಮ ಬದುಕನ್ನು ನೆಮ್ಮದಿ, ತೃಪ್ತಿ, ವಿವೇಕದ ಕಡೆಗೆ ನಡೆಸುವ ಸಂಕಲ್ಪಶಕ್ತಿಯನ್ನು ಕ್ರಿಯಾಶೀಲಗೊಳಿಸುವುದೇ ಅಮಾವಾಸ್ಯೆಯಂದು ಲಕ್ಷ್ಮೀಪೂಜೆಯನ್ನು ಮಾಡುವುದರ ತಾತ್ಪರ್ಯ. </div><div> </div><div> ‘ಬಲಿಪಾಡ್ಯಮಿ’ಯಂದು ಬಲಿ ಚಕ್ರವರ್ತಿಯನ್ನು ಪೂಜಿಸಲಾಗುತ್ತದೆ. ಏಳು ಚಿರಂಜೀವಿಗಳಲ್ಲಿ ಒಬ್ಬನಾಗಿ ಬಲೀಂದ್ರನನ್ನು ಎಣಿಸಲಾಗಿದೆ:</div><div> </div><div> <em><strong>ಅಶ್ವತ್ಥಾಮಾ ಬಲಿರ್ವ್ಯಾಸಃ ಹನುಮಾಂಶ್ಚ ವಿಭೀಷಣಃ l</strong></em></div><div> <em><strong>ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ ll</strong></em></div><div> </div><div> ವಿಷ್ಣು ವಾಮನಾವತಾರದಲ್ಲಿ ಬಲಿಯನ್ನು ಪಾತಾಳಕ್ಕೆ ಅಟ್ಟಿದ ಕಥೆ ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ಈ ಕಥೆಗೆ ಹಲವು ನೆಲೆಗಳ ಅರ್ಥಗಳಿವೆ. ನಮ್ಮ ಅಹಂಕಾರವನ್ನು ಮೆಟ್ಟಿ, ಜೀವನವನ್ನು ರೂಪಿಸಿಕೊಳ್ಳುವ ಆಶಯವೂ ಈ ಕಥೆಯಲ್ಲಿದೆ.</div><div> </div><div> ಬದುಕು ಸರ್ವಕಾಲಕ್ಕೂ ಸಲ್ಲುವ ನೆಮ್ಮದಿಯ ನೆಲೆಯಾಗಲು, ಸೌಂದರ್ಯದ ಖನಿಯಾಗಲು ಅಹಂಕಾರತ್ಯಾಗ ಮುಖ್ಯ ಎಂಬ ಸಂದೇಶವನ್ನೂ ಈ ಕಥೆಯಲ್ಲಿ ಕಾಣಬಹುದಾಗಿದೆ.</div><div> </div><div> ಹೀಗೆ ದೀಪಾವಳಿ ಎನ್ನುವುದು ನಮ್ಮ ಬದುಕನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ದೀಪಗಳ ಹಬ್ಬವಾಗಿದೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>