ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹುಣಸೇಮರದದೊಡ್ಡಿಯ ಶೋಭಾರಾಣಿ ಓದಿದ್ದೆಲ್ಲವೂ ನಗರದಲ್ಲೇ. ವಿಜ್ಞಾನಿ ಆಗುವ ಕನಸು ಹೊತ್ತಿದ್ದ ಇವರು ಎಂ.ಎಸ್ಸಿ ಸ್ನಾತಕೋತ್ತರ ಪದವಿ ನಂತರ ‘ರೇಷ್ಮೆ ಕೃಷಿಯಲ್ಲಿನ ಪ್ರೊಟೀನ್ ಅನಾಲಿಸಿಸ್’ ವಿಷಯದಲ್ಲಿ ಪಿ.ಎಚ್ಡಿ ಪದವಿ ಪಡೆದರು. ಜಾರ್ಖಂಡ್ ವಿಶ್ವವಿದ್ಯಾಲಯದ ರಾಧೇಶ್ಯಾಮ್ ಪ್ರತಿಷ್ಠಾನದಿಂದ ಯುವ ವಿಜ್ಞಾನಿ ಪ್ರಶಸ್ತಿಗೂ ಭಾಜನರಾದರು. ಜೀವವಿಜ್ಞಾನಿ ಆಗಬೇಕು ಎಂದುಕೊಂಡಿದ್ದ ಇವರು ಬೆಂಗಳೂರಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕೆಲಸ ಮಾಡುತ್ತಿದ್ದರು. ಅದು ಅವರ ಆಸಕ್ತಿಯ ಕ್ಷೇತ್ರವೇ ಆಗಿತ್ತು. ಈ ನಡುವೆ ರಾಜ್ಯ ಸರ್ಕಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ‘ಅನುಭವಕ್ಕಾಗಿ ನಿಮ್ಮ ಸಾಮರ್ಥ್ಯ ಅರಿಯಲು ಪರೀಕ್ಷೆ ಎದುರಿಸಿ’ ಎಂದು ಗೈಡ್ ಹೇಳಿದರು. ಪರೀಕ್ಷೆ ಬರೆದರು ಪಾಸಾದರು ಕೆಲಸವೂ ಸಿಕ್ಕಿತು.