ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆಲಸದವರ ಮನಸ್ಸಿನೊಂದಿಗೆ

Last Updated 1 ಜೂನ್ 2012, 19:30 IST
ಅಕ್ಷರ ಗಾತ್ರ

`ಏನಮ್ಮ, ದಿನಕ್ಕಿಂತ ಬೇಗ ಬಂದುಬಿಟ್ಟಿದ್ದೀರಲ್ಲಾ? ಬೇರೆ ಮನೆಗಳ ಕೆಲಸಗಳು ಇಷ್ಟುಬೇಗ ಮುಗಿದುಹೋದುವೇ?~ ಎಂದು ಪ್ರಶ್ನಿಸಿದ ನನಗೆ ನಮ್ಮ ಮನೆಯಕೆಲಸದವರು `ಇಲ್ಲಾ ಅಮ್ನೊರೆ, ಅದೇ, ಒಂದು ವಯಸ್ಸಾದ ಅಜ್ಜಿ-ತಾತ ಇಬ್ಬರೇ ಇರುವವರ ಮನೆಗೆ ಹೋಗುತ್ತೇನಲ್ಲಾ, ಅವರ ಮಗ-ಸೊಸೆ, ಮೊಮ್ಮಕ್ಕಳೆಲ್ಲಾ ಫಾರಿನ್‌ನಿಂದ ಬಂದಿದ್ದಾರೆ. ಅವರೇ ಅಲ್ಲಿಂದಲೇ ಕೆಲಸದವಳನ್ನು ಕರೆದುಕೊಂಡು ಬಂದಿದ್ದಾರೆ. ಅವರಿರುವಷ್ಟು ದಿನವೂ ಅವಳೇ ಎಲ್ಲಾ ಮಾಡಿಕೊಂಡು ಹೋಗುತ್ತಾಳೆ ನೀನು ಬರುವುದೇನು ಬೇಡ ಎಂದು ನನಗೆ ಅಜ್ಜಿ ಹೇಳಿದರು ಆ ಮನೆಯ ಕೆಲಸವಿರಲಿಲ್ಲ ನೋಡಿ ಅದಕ್ಕೇ ಬೇಗ ಬಂದೆ~ ಎಂದು ಸುಡುಬಿಸಲಿನಲ್ಲಿ ಬಹಳ ದೂರದಿಂದ ನಡೆದು ಬಂದ ಆಯಾಸದಿಂದ ಮುಖವನ್ನು ಒರೆಸಿಕೊಳ್ಳುತ್ತಾ ಹಾಗೆಯೇ ನೆಲದ ಮೇಲೆ ಕೂಡುತ್ತಾ ಉತ್ತರಿಸಿದರು.
 
`ಮೊನ್ನೆವರೆಗೂ ಅವರುಗಳು ಬರುತ್ತಾರೆಂದು ಮನೆಯನ್ನು ಕ್ಲೀನ್ ಮಾಡಿಸಿಕೊಂಡ ಅಜ್ಜಿ, ಇವತ್ತು ಹೋದರೆ ಇನ್ನು ಸ್ವಲ್ಪದಿನ ಬರುವುದು ಬೇಡ ಎಂದರೆ ಬೇಜಾರಾಗುವುದಿಲ್ಲವೇ? ಬೆಳಗ್ಗೆಯೇ ನಮ್ಮ ಮನೆಯ ಕೆಲಸಗಳನ್ನು ಮುಗಿಸಿ ಬೇಗಬೇಗ ಹೊರಟು ಬಂದೆ ಅಮ್ಮ. ಮುಂಚೆಯೇ ಹೇಳಿದ್ದರೆ ನೀನು ಬರುತ್ತಿರಲಿಲ್ಲವೆನೋ ಆದರೆ ನಿನಗೆ ತಿಳಿಸಲು ನಿನಗೆ ಮೊಬೈಲ್ ಇಲ್ಲವಲ್ಲಾ ಎಂದರಮ್ಮ~ ಎಂದು ಹೇಳುತ್ತಾ ಹೋದ ಆಕೆಯ ಮಾತನ್ನು ಕೇಳುತ್ತಾ ಅವರಿಗೆ, ನನಗೆ ಇಬ್ಬರಿಗೂ ನಿಂಬೆಯ ಹಣ್ಣಿನ ಪಾನಕ ಮಾಡಲು ಅಡುಗೆ ಮನೆಗೆ ಹೋದೆ.

ಬಾಯಾರಿಕೆಯ ಕಾರಣಕ್ಕೋ ಏನೋ ನಾನು ಕೊಟ್ಟ ಪಾನಕವನ್ನು ಬೇಡವೆಂದು ಹೇಳದೆ ಕುಡಿದು ನಿಧಾನವಾಗೆದ್ದು ಮನೆಯ ಹಿಂದಿನ ಅಂಗಳದಲ್ಲಿ ಹಾಕಿದ್ದ ಪಾತ್ರೆಗಳನ್ನು ತೊಳೆಯಲು  ಹೋದರು. ಮನೆಯ ಕೆಲಸದವರು ಮಾಡುವ ಕೆಲಸವನ್ನು ಪರೀಕ್ಷೆ ಮಾಡುವ ಹವ್ಯಾಸವಿಲ್ಲದ ನಾನು ಅರ್ಧದಷ್ಟು ಓದಿ ಮುಗಿಸಿದ್ದ ನಿಮೆರಾನ್ ಸಾಹುಕಾರ್ ಮತ್ತು ಪ್ರೇಮ್.ಪಿ.ಭಲ್ಲರವರ  `ದ ಬುಕ್ ಆಫ್ ಎಟಿಕೆಟ್ ಆಂಡ್ ಮ್ಯೋನರ್ಸ್‌~ ಎಂಬ ಪುಸ್ತಕವನ್ನು ಓದಲು ಕೈಗೆತ್ತಿಕೊಂಡೆ.

ಸ್ವಲ್ಪ ಹೊತ್ತಾದ ನಂತರ ತಮ್ಮ ಸೀರೆಯ ಸೆರಗಿನಲ್ಲಿ ಕೈಗಳನ್ನು ಒರೆಸಿಕೊಳ್ಳುತ್ತಾ ಬಂದು `ಅಮ್ಮೊರೆ ಪಾತ್ರೆತೊಳೆದಾಯಿತು. ನಾನು ಸ್ವಲ್ಪ ರಾಧಮ್ಮನವರ ಮನೆಗೆ ಹೋಗಿ ಬಾಣಂತಿ ಮತ್ತು ಮಗುವಿಗೆ ನೀರು ಹಾಕಿ ಬರುತ್ತೇನೆ~ ಎಂದರು. ನಾನು ಓದುತ್ತಿದ್ದ ಪುಟಕ್ಕೆ ಗುರುತಿಟ್ಟು `ಸರಿ ಆಯಿತು ನಾಳೆ ಭಾನುವಾರ. ನಿಮಗೆ ವಾರದ ರಜಾವಲ್ಲವೇ! ಸೋಮವಾರ ನೋಡೋಣ~ ಎಂದೆ. ಅವರು ಹಾಗೆಯೇ ಕೆಳಗೆ ಕುಳಿತುಕೊಳ್ಳುತ್ತಾ `ನೀವೂ ವಿದೇಶದಲ್ಲಿದ್ದು ಬಂದವರು. ಅಲ್ಲಿನ ಕೆಲಸದವರು ಕೆಲಸಮಾಡಲು ಕಾರಿನಲ್ಲೇ ಬರುತ್ತಾರಂತೆ! ಅವರಿಗೂ ಮೊಬೈಲ್‌ಗಳಿರುತ್ತವಂತೆ!

ಮನೆ ಯಾವಾಗಲು ತಣ್ಣಗೆ ಇರುವುದರಿಂದ ದೂಳು ಜಾಸ್ತಿ ಇರುವುದಿಲ್ಲವಂತೆ. ಮೊನ್ನೆ ಅಜ್ಜಿ ನಾನು ಅವರ ಮನೆ ಗುಡಿಸಿ-ಒರೆಸುತ್ತಿದ್ದಾಗ ಹೇಳುತ್ತಿದ್ದರು. ಇಲ್ಲಿಗಿಂತ ಅಲ್ಲಿ ಮನೆಯ ಕೆಲಸ ಸಿಗುವುದು ಹಾಗೂ ಕೆಲಸ ಮಾಡುವುದು ಸುಲಭವೇ?~ ಎಂದು ಕೇಳಿದರು.
 
ಆಕೆಯ ಅಂದಿನ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದ ನಾನು `ಹಾಗೇನಿಲ್ಲ. ಇಲ್ಲಿರುವಂತೆ ಅಲ್ಲೂ ಕೇವಲ ಮನೆಯ ಕೆಲಸವೆಂತಲ್ಲ, ಯಾವುದೇ ಕೆಲಸ ಸಿಗಲು ಹಾಗೂ ದೊರೆತ ಕೆಲಸ ಮಾಡುವುದು ಸುಲಭವೇನಲ್ಲ! ಕೆಲವು ವಿಷಯಗಳಲ್ಲಿ ಇಲ್ಲಿಗಿಂತ ವ್ಯವಸ್ಥೆ ಬೇರೆ ಇದ್ದಂತೆ ತೋರಿದರೂ ಕಷ್ಟಗಳು ಅಲ್ಲೂ ಇದ್ದದ್ದೇ~ ಎಂದು ಆದಷ್ಟೂ ಸನ್ನಿವೇಶವು ಗಂಭೀರವಾಗದಂತೆ ಉತ್ತರಕೊಟ್ಟೆ. ನನ್ನ ಉತ್ತರದಿಂದ ಅವರಿಗೆ ಸಮಾಧಾನವಾಯಿತೋ ಇಲ್ಲವೋ ಅಂತೂ ಅವರು ತಲೆ ಅಲ್ಲಾಡಿಸುತ್ತಾ ~ಸೋಮವಾರ ಬರುತ್ತೇನೆ~ ಎಂದು ಹೇಳುತ್ತಾ ಹೊರಟರು.

ಅವರ ಜೊತೆಯಲ್ಲಿ ನಾನೂ ಹೋಗಿ ಮುಂಬಾಗಿಲನ್ನು ಭದ್ರಪಡಿಸಿ ಇನ್ನೇನು ಸ್ವಲ್ಪ ಓದಿದರೆ ಮುಗಿಯುತ್ತಿದ್ದ ಪುಸ್ತಕವನ್ನು ಮತ್ತೆ ಕೈಗೆತ್ತಿಕೊಂಡೆ. ಕಾಕತಾಳೀಯವೆಂಬಂತೆ ಆ ಪುಸ್ತಕದ 21ನೇ ಅಧ್ಯಾಯವು ಗೃಹ ಕಾರ್ಮಿಕರಿಗೆ (ಡೊಮೆಸ್ಟಿಕ್ ವರ್ಕರ್) ಸಂಬಂಧಪಟ್ಟ ಶಿಷ್ಟಾಚಾರ ಹಾಗೂ ನಡವಳಿಕೆಗಳ ಬಗ್ಗೆಯೇ ಇದ್ದಿತು!

ಆ ಅಧ್ಯಾಯವನ್ನೋದಿ ಮುಗಿಸಿಯಾದ ಮೇಲೆ ನಾನು  ಅಲ್ಲಿನ ವಿಷಯಗಳ ಬಗ್ಗೆ ಚಿಂತಿಸಹತ್ತಿದೆ. ಮನೆಯಕೆಲಸದಲ್ಲಿ ಸಹಾಯದ ಅನಿವಾರ್ಯತೆ ಉದ್ಯೋಗ ನೀಡುವವರಿಗೆ ಎಷ್ಟಿದೆಯೋ ಅಷ್ಟೇ ಉದ್ಯೋಗ ಮಾಡುವವರಿಗೂ ಇರುತ್ತದೆ.

ಉದ್ಯೋಗಕ್ಕೆ ಬರುವವರಿಗೂ ಹಣದ, ಆಸರೆಯ, ಆಸೆಗಳನ್ನು ಸಾಕಾರಮಾಡಿಕೊಳ್ಳುವ ಅನಿವಾರ್ಯತೆಗಳಿರುತ್ತವೆ. ಪ್ರಾಮಾಣಿಕರಾದ ಕೆಲಸದವರು ಬೇಕೆಂದು ಬಯಸುವ ಮಾಲೀಕರು ಇದನ್ನು ಮನಗಾಣಬೇಕು.

ಅನಿವಾರ್ಯತೆಗಳೊಂದಿಗೆ ಈ ಎರಡೂ ವ್ಯಕ್ತಿಗಳೂ ತಮ್ಮ ನಡುವಿನ ಸಂಬಂಧ ಚೊಕ್ಕವಾಗಿರಬೇಕಾದಲ್ಲಿ ಅನೇಕ ಶಿಷ್ಟಾಚಾರಗಳನ್ನೂ ಪಾಲಿಸಬೇಕಾಗುತ್ತದೆ. ಅವುಗಳೆಂದರೆ-

* ಮನೆಕೆಲಸ ಮಾಡಲು ವಿಶೇಷವಾದ ಕುಶಲತೆಯೇನೂ ಬೇಡವೆಂದು ತಿಳಿದಾಗ ಮನೆಕೆಲಸದವರ ಆತ್ಮಗೌರವಕ್ಕೆ ಅಷ್ಟು ಬೆಲೆ ಇಲ್ಲದೆ ಹೋಗುತ್ತದೆ. ಆದರೆ ಉದ್ಯೋಗ ನೀಡುವ ವ್ಯಕ್ತಿಗಳ ಕುಟುಂಬದವರು ತಮ್ಮ  ಮಾತು ಹಾಗು ಕಾರ್ಯಗಳಲ್ಲಿ  ಎಂದಿಗೂ ತಮ್ಮ ಸಹಾಯಕ್ಕೆ ಬಂದವರ ಮನಸ್ಸು ನೋಯಿಸಬಾರದು. ಹಾಗೂ ಅವರುಗಳು ನಮ್ಮಂತೆಯೇ ಜೀವಿಗಳೆಂದು ಪ್ರಥಮವಾಗಿ ಅರಿಯಬೇಕು.

* ಕೆಲಸಕ್ಕೆ ನೇಮಿಸಿಕೊಳ್ಳುವ ಮೊದಲೇ ಉದ್ಯೋಗ ನೀಡುವ/ ಮಾಡುವ ವ್ಯಕ್ತಿಗಳ ನಡುವೆ ಸಮಯ, ಕೆಲಸಗಳ ವಿವರಗಳು ಚರ್ಚಿಸಲ್ಪಟ್ಟಿರಬೇಕು. ಅಕಸ್ಮಾತ್ ಈ ವಿಷಯದಲ್ಲಿ ಹೆಚ್ಚು ಕಡಿಮೆಯಾದಲ್ಲಿ ಅದನ್ನು ಮುಂಚಿತವಾಗಿ ತಿಳಿಸಬೇಕಾಗುತ್ತದೆ.

* ಉದ್ಯೋಗ ಮಾಡುವವರಿಗೆ ಮಾಲೀಕರು ಸಮಯಕ್ಕೆ ಸರಿಯಾಗಿ ಸಂಬಳವನ್ನುಕೊಡಬೇಕು. ಕೆಲವೊಮ್ಮೆ ಹಣದ ವಿಷಯದಲ್ಲೇ ಮನಸ್ತಾಪಗಳುಂಟಾಗಬಹುದು.

* ಮಾಲೀಕರು ಉಡುಗೊರೆಗಳು/ ಭಕ್ಷೀಸುಗಳನ್ನು ಸನ್ನಿವೇಶಗಳು ಬಂದಂತೆ ಆಗಾಗ್ಗೆ ಕೊಡುತ್ತಿರಬೇಕು.

* ಎರಡೂ ವ್ಯಕ್ತಿಗಳು ಆಡುವ ಭಾಷೆಯ ಮೇಲೆ ಗೌರವವನ್ನಿಟ್ಟು ಆದಷ್ಟೂ ಒಬ್ಬರ ಮನಸ್ಸನ್ನೊಬ್ಬರು ನೋಯಿಸುವ ಮಾತುಗಳನ್ನಾಡಬಾರದು.

* ವಾರಕ್ಕೊಮ್ಮೆ, ಅಥವಾ ಸನ್ನಿವೇಶಗಳ ಗಂಭೀರತೆಗನುಗುಣವಾಗಿ ರಜೆಯನ್ನು ಮಾಲೀಕರು ಕೊಡಬೇಕು.

ಇಂದು ಪ್ರತಿಯೊಂದು ಕುಟುಂಬದಲ್ಲೂ ಸ್ತ್ರೀ-ಪುರುಷರೆನ್ನದೆ ನೌಕರಿಗೆಂದು ಹೋಗುವ ಸದಸ್ಯರ ಸಂಖ್ಯೆ ಹೆಚ್ಚಾಗಿಯೆ ಆಗುತ್ತಿದೆ. ಹಾಗಾಗಿ ವಿಶ್ವಸನೀಯ ಮನೆಕೆಲಸದವರ ಅವಶ್ಯಕತೆ/ ಅನಿವಾರ್ಯತೆ ಹೆಚ್ಚಾಗುತ್ತಿದೆ.
 
ತಮಗೆ ಸಹಾಯಮಾಡುವವರ ಹಿನ್ನೆಲೆಯ ಬಗ್ಗೆ ಗಂಭೀರವಾಗಿ ಯೋಚಿಸುವ ಮಾಲೀಕರು ತಮ್ಮ ಶಿಷ್ಟಾಚಾರಗಳ ಬಗ್ಗೆಯೂ ಅಷ್ಟೇ ಗಂಭೀರವಾಗಿ ಯೋಚಿಸಬೇಕು! ಮಾಲೀಕರೆಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಇಡೀ ಕುಟುಂಬವಾಗುತ್ತದೆ.

ಮನೆಯವಾರ್ತೆಗಳಲ್ಲಿ ಸಹಾಯಮಾಡಲು ಬರುವ ವ್ಯಕ್ತಿಗಳು ವಯಸ್ಸಾದವರು, ಮಧ್ಯವಯಸ್ಸಿನವರೇ ಅಲ್ಲದೆ ಕೆಲವೊಮ್ಮೆ ಚಿಕ್ಕ ವಯಸ್ಸಿನವರೂ ಆಗಿರುವುದುಂಟು.

ಅನಿವಾರ್ಯತೆಗನುಗುಣವಾಗಿ ಅವರುಗಳ ಅವಶ್ಯಕತೆಗಳಿರುವುದರಿಂದ ಮಾಲೀಕರು ಸನ್ನಿವೇಶಗಳಿಗೆ ತಕ್ಕಂತೆ ತಾಳ್ಮೆಯನ್ನು ತೋರಿಸಬೇಕು. ಕೊನೆಯದಾಗಿ, ಇನ್ನಿತರ ಉದ್ಯೋಗಗಳಲ್ಲಿರುವಂತೆ, ಮಾಲೀಕರಿಗೆ ತನ್ನಲ್ಲಿ ಉದ್ಯೋಗಮಾಡುವವರ ಕೆಲಸದ ನಿರ್ವಹಣೆಯು ತೃಪ್ತಿಯನ್ನು ತರದಿದ್ದಲ್ಲಿ ಅಥವಾ ಉದ್ಯೋಗಮಾಡುವವರಿಗೆ ಮಾಲೀಕರ ಬಗ್ಗೆ ಅಸಂತೃಪ್ತಿ ಇದ್ದಲ್ಲಿ ನೌಕರಿಯಿಂದ ತೆಗೆದುಹಾಕುವ ಮತ್ತು ನೌಕರಿ ತ್ಯಜಿಸುವ ಹಕ್ಕಿರುತ್ತದೆ!

ಬಿಸಿಲು-ಮಳೆ-ಛಳಿಗಳೆನ್ನದೆ ಮನೆಕೆಲಸಗಳನ್ನು ಮಾಡಲು ಬರುವ ವ್ಯಕ್ತಿಗಳನ್ನು ಸಂಯಮದಿಂದ/ ಪ್ರೀತಿ-ವಿಶ್ವಾಸಗಳಿಂದ ನೋಡಿಕೊಳ್ಳುವುದು ಒಂದು ಶಿಷ್ಟಾಚಾರವೇ ಸರಿ!  ಒಬ್ಬರಿಂದೊಬ್ಬರಿಗೆ ಸಮಸ್ಯೆಗಳುಂಟಾಗದಂತೆ ಎಚ್ಚರಿಕೆಯಿಂದ ನಡೆಯುವುದು ಜಾಣ್ಮೆಯೇ ಸರಿ! ಆದರೆ ಅನಿವಾರ್ಯತೆಗೆ ಬೆಲೆಕೊಟ್ಟು ಸನ್ನಿವೇಶಗಳೊಂದಿಗೆ ಹೊಂದಾಣಿಕೆಮಾಡಿಕೊಂಡಲ್ಲಿ ಯಾವುದೂ ಅಸಂಭವವಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT