ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಒಸಿ: ಮುಂದುವರಿದ ಅಸಹಜ ವಾತಾವರಣ

ಭಾರತ–ಪಾಕಿಸ್ತಾನ ಸೇನಾಪಡೆಗಳ ಸಂಘರ್ಘ
Last Updated 14 ನವೆಂಬರ್ 2020, 13:44 IST
ಅಕ್ಷರ ಗಾತ್ರ

ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ ಸೇನಾ ಪಡೆಗಳ ನಡುವಣ ಸಂಘರ್ಷದ ಬಳಿಕ ಗಡಿನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಶನಿವಾರ ಯಾವುದೇ ರೀತಿ ದಾಳಿ ನಡೆದಿಲ್ಲ. ಆದರೆ, ಅಸಹಜ ವಾತಾವರಣ ಮುಂದುವರಿದಿದೆ.

ಭಾರತೀಯ ಸೇನೆಯ ಬಲವಾದ ಪ್ರತೀಕಾರದ ನಂತರ ಶುಕ್ರವಾರ ಸಂಜೆಯಿಂದ ಎಲ್‌ಒಸಿಯಲ್ಲಿ ಯಾವುದೇ ಗುಂಡಿನ ದಾಳಿಯಾಗಲೀ ಅಥವಾ ಷೆಲ್ ದಾಳಿಯಾಗಲೀ ನಡೆದಿಲ್ಲ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್‌ಒಸಿಯಲ್ಲಿ ಪಾಕಿಸ್ತಾನ ಸೇನೆಯು ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಭಾರತದ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದರು. ಭಾರತದ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನದ ಎಂಟು ಸೈನಿಕರು ಸಾವನ್ನಪ್ಪಿದ್ದರು.

ಪಾಕಿಸ್ತಾನ ಸೇನೆಯು ಅಪ್ರಚೋದಿತವಾಗಿ ನಡೆಸಿದ ದಾಳಿಯಲ್ಲಿ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದು, ಆರು ಮಂದಿ ನಾಗರಿಕರು ಮೃತಪಟ್ಟಿದ್ದರು.

‘ಶುಕ್ರವಾರ ರಾತ್ರಿ 11ಗಂಟೆ ಹೊತ್ತಿಗೆ ಷೆಲ್ ದಾಳಿ ನಿಂತುಹೋಯಿತು. ದಾಳಿಗೆ ಬೆದರಿ ನಾನು ಮತ್ತು ನನ್ನ ಕುಟುಂಬ ಸಮೀಪದ ಭೂಗತ ಬಂಕರ್‌ನಲ್ಲಿ ಆಶ್ರಯ ಪಡೆದಿದ್ದೆವು. ಇಂದು ಬೆಳಿಗ್ಗೆ ಬಂಕರ್‌ನಿಂದ ಮನೆಗೆ ಮರಳಿದ್ದೇವೆ. ಆದರೂ ಷೆಲ್ ದಾಳಿ ಯಾವಾಗ ಬೇಕಾದರೂ ಆರಂಭವಾಗಬಹುದು ಎಂಬ ಭಯ ಇಲ್ಲಿನ ಜನರನ್ನು ಆವರಿಸಿದೆ’ ಎಂದು ಉರಿ ಪ್ರದೇಶದ ಮಡಿಯನ್ ಗ್ರಾಮದ ಗುಲಾಮ್ ಮೊಹಮ್ಮದ್ ಚಿಚಿ ಅವರು ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಷ್ಕರ್ ಎ– ತಯಬಾ ಮತ್ತು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರು ಪಾಕಿಸ್ತಾನದ ಸೇನೆ ಜತೆಗೂಡಿ ಭಾರತದ ಭೂಪ್ರದೇಶಕ್ಕೆ ನುಸುಳಿದ್ದಾರೆ ಎಂಬ ವರದಿಗಳಿವೆ. ಆದರೆ, ಇದಾವುದಕ್ಕೂ ಅವಕಾಶ ನೀಡದಂತೆ ಭಾರತೀಯ ಸೇನೆ ಮತ್ತು ಬಿಎಸ್‌ಎಫ್ ಸಿಬ್ಬಂದಿ ಎಲ್‌ಒಸಿ ಉದ್ದಕ್ಕೂ ಬಿಗಿಭದ್ರತೆ ವ್ಯವಸ್ಥೆ ಕಲ್ಪಿಸಿವೆ. ಗಡಿಯಲ್ಲಿ ಯಾರೂ ನುಸುಳದಂತೆ ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಂಡಿವೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT