ದುಶಾಂಬೆ, ತಜಕಿಸ್ತಾನ: ‘ಭಯೋತ್ಪಾದಕ ಕೃತ್ಯ ಹಾಗೂ ಭಯೋತ್ಪಾದಕ ಸಂಘಟನೆಗಳು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಮಾರಕ. ಇಂತಹ ಮಾರಕ ಕೃತ್ಯಗಳನ್ನು ಎದುರಿಸುವ ಸಾಮರ್ಥ್ಯವನ್ನು ಅಫ್ಗಾನಿಸ್ತಾನ ಹೆಚ್ಚಿಸಿಕೊಳ್ಳಬೇಕು‘ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಕರೆ ನೀಡಿದರು.
ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆದ 4ನೇ ಪ್ರಾದೇಶಿಕ ಭದ್ರತಾ ಸಂವಾದ ಸಭೆಯಲ್ಲಿ ಮಾತನಾಡಿದಡೋಭಾಲ್, ‘ಅಫ್ಗಾನಿಸ್ತಾನದ ಸಾಮರ್ಥ್ಯವನ್ನು ಹೆಚ್ಚಿಸಲುಪ್ರಾದೇಶಿಕ ಭದ್ರತಾ ಸಂವಾದದಲ್ಲಿ ಎಲ್ಲರೂ ಭಾಗವಹಿಸುವ ಅವಶ್ಯಕತೆಯಿದೆ.ಅಫ್ಗಾನಿಸ್ತಾನದ ಎಲ್ಲ ಪ್ರಜೆಗಳ ಮಾನವ ಹಕ್ಕುಗಳ ರಕ್ಷಣೆಯ ಜೊತೆಗೆ ಬದುಕುವ ಹಕ್ಕು ಮತ್ತು ಗೌರವಯುತವಾದ ಜೀವನ ನಡೆಸಲು ಆದ್ಯತೆ ನೀಡಬೇಕು’ ಎಂದು ಹೇಳಿದರು.
‘ಭಾರತವು ಹಲವಾರು ಶತಮಾನಗಳಿಂದ ಅಫ್ಗಾನಿಸ್ತಾನದೊಂದಿಗೆ ಐತಿಹಾಸಿಕ ಹಾಗೂ ನಾಗರಿಕ ಸಂಬಂಧಗಳನ್ನು ಹೊಂದಿದ್ದು, ಅಫ್ಗನ್ನಲ್ಲಿ ಪ್ರಮುಖ ಪಾಲುದಾರಿಕೆ ಹೊಂದಿದೆ. ಭಾರತ ಯಾವಾಗಲೂ ಅಫ್ಗನ್ ಪ್ರಜೆಗಳ ಪರವಾಗಿ ನಿಂತಿದೆ’ ಎಂದು ಹೇಳಿದರು.
ಸಭೆಯಲ್ಲಿ ತಜಕಿಸ್ತಾನ್, ರಷ್ಯಾ, ಕಜಕಿಸ್ತಾನ್, ಉಜ್ಬೇಕಿಸ್ತಾನ್, ಇರಾನ್, ಕಿರ್ಗಿಸ್ತಾನ್ ಮತ್ತು ಚೀನಾದ ಭದ್ರತಾ ಸಲಹಾಗಾರರು ಹಾಜರಿದ್ದರು.