ಟೆಹರಾನ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಇಲ್ಲಿ ಇರಾನ್ನ ರಕ್ಷಣಾ ಸಚಿವರೊಂದಿಗೆ ದ್ವಿಪಕ್ಷೀಯ ಸಹಕಾರ ವೃದ್ಧಿ ಮತ್ತು ಪ್ರಾದೇಶಿಕ ಭದ್ರತೆ ಕುರಿತು ಮಾತುಕತೆ ನಡೆಸಿದರು.
ರಷ್ಯಾಕ್ಕೆ ನೀಡಿದ್ದ ಮೂರು ದಿನಗಳ ಭೇಟಿ ಬಳಿಕ ಸಿಂಗ್ ಅವರುಶನಿವಾರ ಇಲ್ಲಿಗೆ ಬಂದರು. ರಷ್ಯಾ, ಚೀನಾ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ಸಚಿವರ ಜತೆಗೂ ಅವರು ಮಾಸ್ಕೊದಲ್ಲಿ ಮಾತುಕತೆ ನಡೆಸಿದ್ದರು.
‘ಇರಾನಿನ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಮಿರ್ ಹತಾಮಿ ಅವರೊಂದಿಗೆ ಟೆಹರಾನ್ನಲ್ಲಿ ನಡೆಸಿದ ಚರ್ಚೆ ಫಲಪ್ರದವಾಗಿದೆ. ಅಫ್ಗಾನಿಸ್ತಾನ ಸೇರಿದಂತೆ ಪ್ರಾದೇಶಿಕ ಭದ್ರತೆ ಕುರಿತೂ ಮಾತುಕತೆ ನಡೆಸಿದೆವು’ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇಬ್ಬರೂ ಸಚಿವರ ನಡುವೆ ಸೌಹಾರ್ದಯುತ ಮಾತುಕತೆ ನಡೆಯಿತು. ಭಾರತ ಮತ್ತು ಇರಾನ್ ನಡುವೆ ಬಹಳ ಹಿಂದಿನಿಂದಲೂ ಇರುವ ಸಾಂಸ್ಕೃತಿಕ ಬಾಂಧವ್ಯದ ಬಗ್ಗೆ ಕೂಡ ಸ್ಮರಿಸಿದರು ಎಂದು ರಾಜನಾಥ್ ಅವರ ಕಚೇರಿ ಅಧಿಕಾರಿಗಳ ಟ್ವೀಟ್ ಹೇಳಿದೆ.