ಅಮ್ಸ್ಟರ್ ಡ್ಯಾಂ (ಪಿಟಿಐ): ‘ಪ್ರಜಾಪ್ರಭುತ್ವ, ಆರ್ಥಿಕತೆಯ ದೃಷ್ಟಿಯಿಂದ ಪ್ರವರ್ಧಮಾನದಲ್ಲಿರುವ ಭಾರತ– ನೆದರ್ಲೆಂಡ್ ಜಾಗತಿಕ ಸವಾಲು ಎದುರಿಸುವಲ್ಲಿ ‘ಸಹಜ ಪಾಲುದಾರರು’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೇಳಿದ್ದಾರೆ.
‘ಶಾಂತಿ, ಭದ್ರತೆ ಮತ್ತು ಅಭ್ಯುದಯದ ದೃಷ್ಟಿಯಿಂದ ಉಭಯ ದೇಶಗಳು ಏಕರೂಪದ ಬದ್ಧತೆ ಹೊಂದಿವೆ’ ಎಂದೂ ಹೇಳಿದರು. ನೆದರ್ಲೆಂಡ್ ಭೇಟಿ ಅವಧಿಯಲ್ಲಿ ರಾಷ್ಟ್ರಪತಿ ಅವರು ನೆದರ್ಲೆಂಡ್ನ ಉನ್ನತ ನಾಯಕರ ಜೊತೆಗೆ ಚರ್ಚಿಸುವರು.
1988ರಲ್ಲಿ ಆಗ ರಾಷ್ಟ್ರಪತಿಯಾಗಿದ್ದ ಆರ್.ವೆಂಕಟರಾಮನ್ ಅವರು ನೆದರ್ಲೆಂಡ್ಗೆ ಭೇಟಿ ನೀಡಿದ್ದರು. ಈಗ, 34 ವರ್ಷದ ನಂತರ ಭೇಟಿ ನೀಡುತ್ತಿರುವ ಭಾರತದ ಎರಡನೇ ರಾಷ್ಟ್ರಪತಿ ಕೋವಿಂದ್ ಆಗಿದ್ದಾರೆ.
ರಾಜ ವಿಲಿಯಂ ಅಲೆಕ್ಸಾಂಡರ್ ಏರ್ಪಡಿಸಿದ್ದ ಭೋಜನಕೂಟದಲ್ಲಿ ಭಾಗಿಯಾಗಿದ್ದ ರಾಷ್ಟ್ರಪತಿ, ‘ಉಭಯ ದೇಶಗಳು ಸ್ವಾತಂತ್ರ ಪಡೆದ 75ನೇ ವರ್ಷಾಚರಣೆಯಲ್ಲಿವೆ. ಹೀಗಾಗಿ, ಉಭಯ ದೇಶಗಳ ದ್ವಿಪಕ್ಷೀಯ ಚರ್ಚೆ ಒಂದು ಮೈಲುಗಲ್ಲು’ ಎಂದು ಬಣ್ಣಿಸಿದರು.
ಇಂಡೊ–ಪ್ಯಾಸಿಫಿಕ್ ವಲಯ ಮತ್ತು ಯೂರೋಪ್ ಒಕ್ಕೂಟದಲ್ಲಿ ನೆದರ್ಲೆಂಡ್ನ ಪಾತ್ರ ನಿರ್ಣಾಯಕವಾದುದು. ಭಾರತ ಮತ್ತು ಯುರೋಪ್ ಒಕ್ಕೂಟದ ಬಾಂಧವ್ಯ ವೃದ್ಧಿಯಲ್ಲಿ ನೆದರ್ಲೆಂಡ್ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು.
ಪಶ್ಚಿಮ ಯುರೋಪ್ ರಾಷ್ಟ್ರಗಳಿಂದ ಭಾರತಕ್ಕೆ ಹೂಡಿಕೆ ಪ್ರಮಾಣ ಹೆಚ್ಚಾಗಬೇಕಾಗಿದೆ. ಡಿಜಿಟಲ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಮಾರ್ಟ್ ಸಿಟಿ ಅಭಿವೃದ್ಧಿ ಸೇರಿ ವಿವಿಧ ಸುಧಾರಣಾ ಕ್ರಮಗಳು ಹೂಡಿಕೆ ಸ್ನೇಹಿಯಾಗಿವೆ ಎಂದು ಹೇಳಿದರು.
ನೆದರ್ಲೆಂಡ್ನ ರಾಜ ಮತ್ತು ರಾಣಿ ಈ ಹಿಂದೆ 2019ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ರಾಷ್ಟ್ರಪತಿ ಭೇಟಿ ನೀಡಿದ್ದಾರೆ. ಕೋವಿಡ್ ಅವಧಿಯಲ್ಲಿ ನೀಡಿದ ನೆರವಿಗಾಗಿ ಇದೇ ಸಂದರ್ಭದಲ್ಲಿ ನೆದರ್ಲೆಂಡ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.