ಬೀಜಿಂಗ್: ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್ಎಸಿ) ಶಾಂತಿ ನೆಲೆಸುವಂತೆ ಮಾಡಲು ಉಭಯ ದೇಶಗಳ ನಾಯಕರ ನಡುವಿನ ಒಮ್ಮತದ ನಿರ್ಧಾರವನ್ನು ಗೌಪ್ಯವಾಗಿಡಬಾರದು ಎಂದು ಚೀನಾಕ್ಕೆ ಭಾರತ ಸ್ಪಷ್ಟವಾಗಿ ಹೇಳಿದೆ.
ಪೂರ್ವ ಲಡಾಖ್ನ ಗಡಿಯಲ್ಲಿ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು. ಗಡಿ ಬಿಕ್ಕಟ್ಟಿನಿಂದಾಗಿ ಹಿನ್ನಡೆ ಅನುಭವಿಸಿದ್ದ ದ್ವಿಪಕ್ಷೀಯ ಸಂಬಂಧದ ಮರುನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಚೀನಾದಲ್ಲಿನ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಹೇಳಿದರು.
ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ (ಐಸಿಡಬ್ಲ್ಯುಎ) ಹಾಗೂ ಸಿಪಿಐಎಫ್ಎ (ಚೈನೀಸ್ ಪೀಪಲ್ಸ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಅಫೇರ್ಸ್) ಜಂಟಿಯಾಗಿ ಆಯೋಜಿಸಿದ್ದ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಎಸಿಯಲ್ಲಿ ಶಾಂತಿ–ಸ್ಥಿರತೆ ಸಾಧಿಸುವ ಸಂಬಂಧ ಉಭಯ ದೇಶಗಳ ನಾಯಕರು ಒಮ್ಮತಕ್ಕೆ ಬಂದು ಕೈಗೊಂಡ ನಿರ್ಧಾರಗಳನ್ನು ಚೀನಾ ಏಕೆ ನಿರ್ಲಕ್ಷಿಸುತ್ತಿದೆ’ ಎಂದು ಮಿಸ್ರಿ ಅವರು ಚೀನಾ ಅಧಿಕಾರಿಗಳನ್ನು ಪ್ರಶ್ನಿಸಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾಯ್ದು ಹೋಗಲಿರುವ ‘ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್’ ಹಾಗೂ ‘ಬೆಲ್ಟ್ ರೋಡ್ ಇನಿಷಿಯೇಟಿವ್ (ಬಿಆರ್ಐ)’ ಯೋಜನೆಗಳನ್ನು ಮಿಸ್ರಿ ಪ್ರಸ್ತಾಪಿಸಿದರು.
‘ಇತರ ದೇಶಗಳೊಂದಿಗೆ ಸಮಾಲೋಚನೆ, ಒಪ್ಪಂದ ಇಲ್ಲದೆಯೇ ಯಾವುದೇ ದೇಶ ತನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಮುಂದಾಗಬಾರದು’ ಎಂದು ಹೇಳಿದರು.