ಕಠ್ಮಂಡು (ನೇಪಾಳ): ಭಾನುವಾರ ನಡೆದ ತುರ್ತು ಸಭೆಯಲ್ಲಿ ಸಂಸತ್ ವಿಸರ್ಜಿಸಲು ನೇಪಾಳದ ಕ್ಯಾಬಿನೆಟ್ ಶಿಫಾರಸು ಮಾಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಂದಿನ (ಭಾನುವಾರ) ತುರ್ತು ಕ್ಯಾಬಿನೆಟ್ ಸಭೆಯಲ್ಲಿ ಸಂಸತ್ತನ್ನು ವಿಸರ್ಜಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ ಎಂದು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಸಂಪುಟದಲ್ಲಿ ಇಂಧನ ಸಚಿವರಾಗಿರುವ ಬರ್ಸಮನ್ ಪುನ್ ತಿಳಿಸಿದರು.
ವಿವಾದಾತ್ಮಕ ಆರ್ಡಿನೆನ್ಸ್ ಹಿಂತೆಗೆದುಕೊಳ್ಳುವಂತೆ ಆಡಳಿತರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದಲ್ಲಿ (ಎನ್ಸಿಪಿ) ತಮ್ಮ ವಿರೋಧಿಗಳ ಒತ್ತಡಕ್ಕೆ ಒಳಗಾಗಿದ್ದ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಸಂಸತ್ತನ್ನು ವಿಸರ್ಜಿಸಲು ಶಿಫಾರಸು ಮಾಡಿದರು.
ಪ್ರಧಾನಿ ಒಲಿ ಮಂಗಳವಾರ ಹೊರಡಿಸಿದ ಸಾಂವಿಧಾನಿಕ ಮಂಡಳಿ ಕಾಯ್ದೆಯೊಂದಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ಹಿಂಪಡೆಯುವ ಒತ್ತಡದಲ್ಲಿದ್ದರು. ಇದನ್ನು ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಒಂದು ಗಂಟೆಯೊಳಗೆ ಅಂಗೀಕರಿಸಿದ್ದರು.
ಕೇವಲ ಮೂರು ಸದಸ್ಯರ ಹಾಜರಾತಿಯಲ್ಲಿ ಸಭೆಗಳನ್ನು ಕರೆಯುವ ಹಾಗೂ ನಿರ್ಣಯಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಈ ಕಾಯ್ದೆಯು ನೀಡುತ್ತದೆ.