ಕಾಬೂಲ್: ಕಾಶ್ಮೀರ ವಿಷಯವೂ ಸೇರಿದಂತೆ ತಮ್ಮ ನಡುವೆ ಬಾಕಿ ಇರುವ ಸಮಸ್ಯೆಗಳನ್ನು ಭಾರತ– ಪಾಕಿಸ್ತಾನ ಒಟ್ಟಾಗಿ ಪರಿಹರಿಸಿಕೊಳ್ಳಬೇಕು. ಅವರೆಡೂ ನೆರೆ–ಹೊರೆಯ ದೇಶಗಳಾಗಿದ್ದು, ಅವರ ನಡುವಣ ವಿಚಾರಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.
ಪಾಕಿಸ್ತಾನದ ಟಿವಿ ಚಾನೆಲ್ ‘ಎಆರ್ವೈ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಜಾಹಿದ್, ‘ವಿವಾದಿತ ಪ್ರದೇಶದ ಬಗ್ಗೆ ಭಾರತವು ಸಕಾರಾತ್ಮ ಧೋರಣೆ ಹೊಂದಬೇಕಿದೆ’ ಎಂದು ಹೇಳಿದ್ದಾರೆ.
ಭಾರತ ಸೇರಿದಂತೆ ಎಲ್ಲ ದೇಶಗಳೊಂದಿಗೆ ತಾಲಿಬಾನ್ ಉತ್ತಮ ಬಾಂಧವ್ಯ ಬಯಸುತ್ತದೆ. ಅಫ್ಗಾನಿಸ್ತಾನದ ಜನರ ಹಿತಾಸಕ್ತಿಗೆ ಅನುಗುಣವಾಗಿ ಭಾರತವು ನೀತಿಯನ್ನು ರೂಪಿಸಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಯಾವುದೇ ದೇಶದ ವಿರುದ್ಧ ಅಫ್ಗಾನಿಸ್ತಾನದ ನೆಲವನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಈಗಿನ ಅಫ್ಗಾನಿಸ್ತಾನ ಆಡಳಿತವು ಪಾಕಿಸ್ತಾನವನ್ನು ತನ್ನ ಎರಡನೇ ಮನೆ ಎಂದೇ ಭಾವಿಸಿದೆ. ಹೀಗಾಗಿ ಆ ದೇಶದ ವಿರುದ್ಧದ ಚಟುವಟಿಕೆಗಳಿಗೆ ಅಫ್ಗಾನಿಸ್ತಾನದ ನೆಲದಲ್ಲಿ ಅವಕಾಶ ನೀಡುವುದಿಲ್ಲ ಎಂದು ಮುಜಾಹಿದ್ ಸಂದರ್ಶನದಲ್ಲಿ ಹೇಳಿರುವುದಾಗಿ ‘ಐಎಎನ್ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.