ಇಸ್ಲಾಮಾಬಾದ್: ‘ಪಾಕಿಸ್ತಾನವು ಶೀಘ್ರದಲ್ಲೇ ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳಲಿದೆ’ ಎಂದು ಪಾಕಿಸ್ತಾನದ ನೂತನ ಹಣಕಾಸು ಸಚಿವ ಹಮ್ಮದ್ ಅಜರ್ ಅವರು ಬುಧವಾರ ಹೇಳಿದ್ದಾರೆ.
ಪಾಕಿಸ್ತಾನವು ಭಾರತದಿಂದ ಎರಡು ವರ್ಷಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿತ್ತು.
‘ಆರ್ಥಿಕ ಸಮನ್ವಯ ಸಮಿತಿಯು (ಇಸಿಸಿ) ಬುಧವಾರ ಖಾಸಗಿ ವಲಯಕ್ಕೆ ಭಾರತದಿಂದ ಐದು ಲಕ್ಷ ಟನ್ ಬಿಳಿ ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ. ಭಾರತದಲ್ಲಿ ಸಕ್ಕರೆಯ ಬೆಲೆ ಸಾಕಷ್ಟು ಅಗ್ಗವಾಗಿದೆ. ಆದ್ದರಿಂದ ನಾವು ಭಾರತದೊಂದಿಗೆ ಸಕ್ಕರೆ ವ್ಯಾಪಾರವನ್ನು ಪುನರಾರಂಭಿಸಲು ನಿರ್ಧರಿಸಿದ್ದೇವೆ. ಜೂನ್ನಿಂದ ಹತ್ತಿ ಮತ್ತು ಸಕ್ಕರೆ ಆಮದು ಮಾಡಿಕೊಳ್ಳುತ್ತೇವೆ’ ಎಂದು ಜಿಯೊ ಟಿವಿಗೆ ತಿಳಿಸಿದ್ದಾರೆ.
‘ಭಾರತದಿಂದ ಹತ್ತಿ ಆಮದನ್ನು ನಿಷೇಧಿಸಲಾಗಿತ್ತು. ಇದು ನಮ್ಮ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ನೇರ ಪರಿಣಾಮ ಬೀರಿತ್ತು ಆದರೆ, ವಾಣಿಜ್ಯ ಸಚಿವಾಲಯದ ಶಿಫಾರಸಿನ ಮೇರೆಗೆ ನಾವು ಭಾರತದಿಂದ ಪುನಃ ಹತ್ತಿ ಆಮದು ಮಾಡಿಕೊಳ್ಳುವುದನ್ನು ಪುನರಾರಂಭಿಸಲು ನಿರ್ಧರಿಸಿದ್ದೇವೆ’ಎಂದೂ ಅವರು ಹೇಳಿದ್ದಾರೆ.
‘ಹತ್ತಿ ಮತ್ತು ಸಕ್ಕರೆಯ ಆಮದು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ವ್ಯಾಪಾರ ಸಂಬಂಧದ ಪುನರುಜ್ಜೀವನಕ್ಕೆ ಕಾರಣವಾಗಲಿದೆ’ ಎಂದು ‘ಡಾನ್’ಪತ್ರಿಕೆಯು ವಿಶ್ಲೇಷಿಸಿದೆ.