ಇಸ್ಲಾಮಾಬಾದ್: ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಎರಡು ವರ್ಷಗಳ ಹಿಂದೆ ರದ್ದುಗೊಳಿಸಿದ ಭಾರತದ ನಿರ್ಧಾರವನ್ನುಖಂಡಿಸಿ ಪಾಕಿಸ್ತಾನದಲ್ಲಿ ಗುರುವಾರ ಪ್ರತಿಭಟನೆಗಳು ನಡೆದವು.
ಪ್ರಧಾನಿ ಇಮ್ರಾನ್ ಖಾನ್, ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಸೇರಿದಂತೆ ಹಲವಾರು ಮುಖಂಡರು, ಎರಡು ವರ್ಷಗಳ ಹಿಂದೆ ಭಾರತ ಕೈಗೊಂಡಿದ್ದ ನಿರ್ಧಾರವನ್ನು ಖಂಡಿಸಿದರಲ್ಲದೇ, ಕಾಶ್ಮೀರ ಜನತೆಗೆ ತಮ್ಮ ಬೆಂಬಲ ಇದೆ ಎಂದು ಘೋಷಿಸಿದರು.
2019ರ ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ್ದ ಭಾರತ, ಕಣಿವೆ ರಾಜ್ಯವನ್ನು ವಿಭಜಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತು. ಈ ನಡೆಯನ್ನು ವಿರೋಧಿಸಿದ್ದ ಪಾಕಿಸ್ತಾನ ನಂತರ ಭಾರತದೊಂದಿಗಿನ ಸಂಬಂಧವನ್ನು ಕಡಿದುಗೊಂಡಿತು. ವಾಣಿಜ್ಯ ಸಂಬಂಧಗಳನ್ನು ಸಹ ಅಮಾನತುಗೊಳಿಸಿತ್ತು.