ವಿಶ್ವಸಂಸ್ಥೆ: ಜಾಗತಿಕ ಭಯೋತ್ಪಾದನೆ ವಿರುದ್ಧ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಚರ್ಚಿಸಲು ಸಭೆಯೊಂದನ್ನು ಆಯೋಜಿಸುವಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ವಿಫಲವಾಗಿವೆ. ವಿಶ್ವಸಂಸ್ಥೆಯ ಈ ವಿಳಂಬ ಧೋರಣೆ ಮುಂದುವರಿಯುತ್ತಲೇ ಇದೆ ಎಂದು ಭಾರತ ಹೇಳಿದೆ.
ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಮಾತನಾಡಿದ, ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ರಾಯಭಾರ ಕಚೇರಿಯಲ್ಲಿ ಎರಡನೇ ಕಾರ್ಯದರ್ಶಿಯಾಗಿರುವ ದಿನೇಶ್ ಸೇತಿಯಾ ಅವರು ಭಾರತದ ನಿಲುವನ್ನು ಮಂಡಿಸಿದರು.
‘ಭಯೋತ್ಪಾದನೆ ಕುರಿತಂತೆ ಎಲ್ಲರೂ ಒಪ್ಪುವಂತಹ ವ್ಯಾಖ್ಯಾನಕ್ಕೆ ವಿಶ್ವಸಂಸ್ಥೆ ಸಮ್ಮತ ವ್ಯಕ್ತಪಡಿಸುತ್ತಿಲ್ಲ. ಜಾಗತಿಕವಾಗಿ ಕಂಟಕವಾಗಿ ಪರಿಣಮಿಸಿರುವ ಉಗ್ರರ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಲು ಸಮಗ್ರ ನೀತಿಯನ್ನು ಸಹ ರೂಪಿಸುತ್ತಿಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ಭಯೋತ್ಪಾದನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಹೀಗಾಗಿ, ವಿಶ್ವಸಂಸ್ಥೆಯ ಪ್ರಸ್ತುತತೆ ಬಗ್ಗೆಯೇ ಅನುಮಾನಪಡುವಂತಾಗಿದೆ’ ಎಂದೂ ಅವರು ಹೇಳಿದರು.