ತಣ್ಣಗಾಗುತ್ತಿದೆ ಇರಾನಿ ಚಾಯ್ ಸಂಸ್ಕೃತಿ (ರಶ್ಮಿ ಎಸ್ ಜೂನ್ 9) ಲೇಖನ ಇರಾನಿ ಚಾಯ್ ಕುರಿತಾದ ಹಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿಸಿಕೊಟ್ಟಿತು. ನಾನು ಇರಾನಿ ಚಾಯ್ ಅಭಿಮಾನಿ. ಕಳೆದ ವಾರ ಸಿಕಂದರಾಬಾದ್ಗೆ ಹೋದಾಗ ರೈಲು ನಿಲ್ದಾಣ ಬಳಿಯ ರೆಜಿಮೆಂಟಲ್ ಬಜಾರ್ನ 'ಬ್ಲೂ-ಸಿ'ನಲ್ಲಿ ಬಿಸ್ಕೂಟ್ನೊಂದಿಗೆ ಚಾಯ್ ಕೊಡಿದು ಖುಷಿಪಟ್ಟೆ.
ವೆಂಕಟೇಶ್ ಮುದಗಲ್, ಕಲಬುರಗಿ
ಕಲ್ಯಾಣ ಕರ್ನಾಟಕದಲ್ಲಿನ ಇರಾನಿ ಚಹಾದ ವೈಶಿಷ್ಟ್ಯಗಳೊಂದಿಗೆ ಮಾನವೀಯ ಸಂಬಂಧಗಳನ್ನು ತಮ್ಮದೆಯಾದ ಭಾಷೆಯಲ್ಲಿ ಲೇಖಕರು ಸೊಗಸಾಗಿ ವಿವರಿಸಿದ್ದಾರೆ. ನಾನೇ ಇರಾನಿ ಚಾಯ್ ಸೇವಿಸಿದಷ್ಟು ಸಂತೋಷವಾಯಿತು.
ಬೀರಪ್ಪ ಡಿ.ಡಂಬಳಿ ಕೋಹಳ್ಳಿ ಬೆಳಗಾವಿ ಜಿಲ್ಲೆ
ಇರಾನಿ ಕೆಫೆಯ ಪರಿಮಳಭರಿತ ಚಹಾ ಇಲ್ಲದಿದ್ದರೂ ಇಂದಿಗೂ ಚಹಾ ಸಂಸ್ಕೃತಿ ಉಳಿದಿದೆ. ಚಹಾದ ಸ್ವಾದ, ಚಹಾ ಪ್ರಿಯರಿಗಷ್ಟೆ ಗೊತ್ತು. ಒಂದೊಂದೆ ಗುಟುಕ ಹೀರುತ್ತಾ ಆಸ್ವಾದಿಸುವ ಪರಿ ಕಳೆದು ಹೋದ ಚಹಾನುಭವದ ಮೆಲುಕು ಹಾಕಿತು.
ಎಸ್.ವಿಶ್ವನಾಥ ಐನಹಳ್ಳಿ ಮೈಸೂರು
ಲೇಖನ ಓದಿ ವಿಷಾದವೆನಿಸಿತು. ಆತಿಥ್ಯದ ಸಂಸ್ಕೃತಿ ಮರೆಯಾಗದಂತೆ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಹೊಣೆಯಾಗಿದೆ. ಇದಕ್ಕೆ ಜನರ ಸಹಕಾರವಿರಲಿ. ಪ್ರತಿ ಊರಿನಲ್ಲಿಯೂ ಒಂದಾದರೂ ಇರಾನಿ ಚಾಯ್ ಕೆಫೆ ತೆರೆಯುವಂತೆ ಆಗಲಿ.
ಸಾವಿತ್ರಮ್ಮ. ಕೆ. ವಿಭೂತಿ ಹರಿಹರ
ಒಣಮೀನು ನಂಟು ನೆನಪು ಮಧುರ: ನೆಲದ ನಂಟು ಒಣ ಮೀನು ಗಂಟು (ಗಣಪತಿ ಹೆಗಡೆ) ಕಾರವಾರದ ವಿಶೇಷ ಮೀನು ಮಾರುಕಟ್ಟೆ ಭಾವನಾತ್ಮಕ ನೆಂಟರನ್ನು ಬೆಸೆಯುವ ಪರಿಯೇ ಸೋಜಿಗ. ಇದಕ್ಕಾಗಿಯೇ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕಾರವಾರ ಮೂಲದ ಜನರು ವರ್ಷಕ್ಕೊಮ್ಮೆ ಸಿಗುವ ಒಣಮೀನನ್ನು ಖರೀದಿಸಿ ತಿಂಗಳು ಗಟ್ಟಲೆ ಅದರ ರುಚಿಯನ್ನು ಆಸ್ವಾದಿಸುವ ಪರಿ ಅನುಭವಿಸಿದವರಿಗೇ ಗೊತ್ತು. ಒಟ್ಟಿನಲ್ಲಿ ಮೇ ತಿಂಗಳ ಕೊನೆಯ ಎರಡು ಭಾನುವಾರ ಸ್ವಂತ ನೆಲದಿಂದ ದೂರದೂರುಗಳಲ್ಲಿ ನೆಲೆಸಿರುವ ಬಂಧು ಬಾಂಧವರು, ಸ್ನೇಹಿತರನ್ನು ಬೆಸೆಯುವ ಈ ಒಣಮೀನಿನ ಸಂತೆಯ ಅನುಭವ ಮಧುರ ನೆನಪು.